ಸ್ಥಳೀಯ ಕೆ.ಎಮ್.ಇ.ಎಸ್.ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ಕನ್ನಡಾಂಬೆಯ ಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸುವುದರ ಮೂಲಕ ಆಚರಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ಈ ಸಂದರ್ಭದಲ್ಲಿ ಮಾತನಾಡುತ್ತಾ”ಇಂದಿನ ಕಂಪ್ಯೂಟರ್ ಯುಗದಲ್ಲಿ ನಾವು ನಮ್ಮ ಮಾತೃ ಭಾಷೆಯಾದ ಕನ್ನಡವನ್ನೇ ಮರೆತು ಬಿಟ್ಟಿದ್ದೇವೆ. ನಮ್ಮ ಭಾವನಾತ್ಮಕ ಬೆಳವಣಿಗೆಗೆ ಕನ್ನಡ ಅತೀ ಅಗತ್ಯ. ಇಂದಿನ ನಮ್ಮ ಬದುಕು ಯಾಂತ್ರಿಕವಾಗಿ ಮಾರ್ಪಾಟಾಗಿದ್ದು ಭಾವನೆಗಳಿಗೆ ಬೆಲೆಯಿಲ್ಲದಿವುದರಿಂದ ಸಮಾಜದಲ್ಲಿ ಕ್ರೌರ್ಯ ತಾಂಡವಾಡುತ್ತಿದೆ. ಕನ್ನಡ ಮನಸ್ಸಿನ ಭಾಷೆ. ೧೯೫೬ ರಿಂದ ನಮ್ಮ ರಾಜ್ಯ ಮೈಸೂರು ರಾಜ್ಯವಾಗಿದ್ದು 1973 ನವೆಂಬರ್ ಒಂದರಂದು ಕರ್ನಾಟಕ ರಾಜ್ಯವಾಗಿ ಮರು ನಾಮಕರಣಗೊಂಡಿತು. ಕರ್ನಾಟಕವು ಸಾಹಿತ್ಯ, ಸಂಸ್ಕೃತಿ, ಸಂಗೀತಗಳ ತವರೂರು. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ನೆಲೆಬೀಡು. ಶಿಲ್ಪಕಲೆಗಳ ಸುಂದರ ನಾಡು. ಇಂದು ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಾಗಿದೆ.” ಎಂದರು.
ಪ್ರೌಢ ಶಾಲಾ ಮುಖ್ಯಸ್ಥೆ ಶ್ರಿಮತಿಯವರು ಮತ್ತು ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಉಪನ್ಯಾಸಕರು, ಶಿಕ್ಷಕರು, ಶಿಕ್ಷಕಿಯವರು. ಕನ್ನಡಾಂಬೆಗೆ ಪುಷ್ಪಾಂಜಲಿಯನ್ನು ಸಮರ್ಪಿಸಿ ಗೌರವಾರರ್ಪಣೆಗೈದರು.
