ಕಾರ್ಕಳ ಪುರಸಭಾ ವ್ಯಾಪ್ತಿಯ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ವಾರ್ಷಿಕ ಮಹೋತ್ಸವವು ವರ್ಷಪ್ರತಿಯಂತೆ ಜರಗುವುದು ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ಕಾಳಿಕಾಂಬಾ ಕರಿಯಕಲ್ಲು ರಸ್ತೆಯ ಗೋಳು ಹೇಳತೀರದು.
ಕಾಳಿಕಾಂಬಾ ಕ್ರಾಸ್ ನಲ್ಲಿ ಪೈಪ್ ಲೈನಿಗೆ ತೆಗೆದ ಹೊಂಡಗಳನ್ನು ಸರಿಯಾಗಿ ಮುಚ್ಚದೆ ರಸ್ತೆಯನ್ನು ಅರ್ಧಕ್ಕೆ ನುಂಗಿರುತ್ತದೆ. ರಥವನ್ನು ಎಳೆಯುವ ಪ್ರದೇಶದಲ್ಲಿ ರಸ್ತೆ ಪ್ಯಾಚ್ ಮಾಡದೆ ಇರುವುದು, ಮುಖ್ಯ ರಸ್ತೆಯಲ್ಲಿ ಹೊಂಡವನ್ನು ಬೇಕಾಬಿಟ್ಟಿ ತೆರೆದಿಟ್ಟು ಸಂಚಾರದ ಸಮಸ್ಯೆ ಸೃಷ್ಟಿಸುವುದು, ದೇವಸ್ಥಾನದ ಸರಿ ಮುಂಭಾಗದ ರಸ್ತೆಯಲ್ಲಿ ಪೈಪ್ ಲೈನ್ ಸರಿಪಡಿಸಲು ತೆಗೆದ ಹೊಂಡ ಮುಚ್ಚದೆ ಪ್ರಾಣಕ್ಕೆ ಅಪಾಯಕರವಾದ ಸಂಚಾರ ಮಾಡಿರುವುದು ಎಷ್ಟು ಸರಿ.
ಈ ಎಲ್ಲಾ ಸಮಸ್ಯೆಗಳು ಒಂದು ಎರಡು ದಿನದಿಂದ ಅಲ್ಲ, ಸುಮಾರು ಒಂದು ತಿಂಗಳಿನಿಂದ ಗೋಳು ಇದೆ. ದೇವರ ಕಟ್ಟೆ ಪೂಜೆ, ಪಲ್ಲಕ್ಕಿ ಉತ್ಸವ, ರಥ ಎಳೆಯುವುದು, ದೈವಗಳ ನೇಮೋತ್ಸವಕ್ಕೆ ವಿಶ್ವಕರ್ಮ ಸಮಾಜದ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಬರುವುದರಿಂದ ಪುರಸಭೆ ಎಚ್ಚೆತ್ತು ಕೊಳ್ಳದಿರುವುದು ದುರಂತವೇ ಸರಿ ಎಂದು ಕಾರ್ಕಳ ಮಾಜಿ ಪುರಸಭಾ ಸದಸ್ಯರಾದ ಪ್ರಕಾಶ್ ರಾವ್ ತಿಳಿಸಿದ್ದಾರೆ.