ಮೂಡುಬಿದಿರೆ : ಪ್ರತಿಯೊಬ್ಬರಲ್ಲಿಯೂ ಪ್ರತಿಭೆ, ಕೌಶಲ್ಯಗಳಿರುತ್ತವೆ. ಅದನ್ನು ಅಭಿವ್ಯಕ್ತಿಸಲು ಬೇಸಿಗೆ ಶಿಬಿರಗಳು ಮೂಲ ತಳಹದಿಯಾಗುತ್ತವೆ. ವಿದ್ಯಾರ್ಥಿ ಹಂತದಲ್ಲೇ ಸಮಯವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉನ್ನತಿ ಸಾಧಿಸಬೇಕು ಎಂದು ಡ್ರೈ ಫ್ಲವರ್ ಕಲಾವಿದೆ ರೂಪಾ ವಸುಂದರ ಆಚಾರ್ಯ ಹೇಳಿದರು.
ಕಾಳಿಕಾಂಬಾ ಮಹಿಳಾ ಸಮಿತಿಯ ವತಿಯಿಂದ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆದ ಎರಡು ದಿನಗಳ ಉಚಿತ ಬೇಸಿಗೆ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಖ್ಯಾತ ರಂಗನಿರ್ದೇಶಕ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನರಾಮ್ ಸುಳ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಂಬಂಧಗಳು ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಶಿಬಿರಗಳು ಅಗತ್ಯ. ಶಿಬಿರಗಳು ಶಿಕ್ಷಣಕ್ಕೆ ಪೂರಕವಾಗಿರಬೆಕು. ಮಕ್ಕಳಿಗೆ ಖುಷಿಯನ್ನು ನೀಡುವಂತಿರಬೇಕು ಎಂದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ ಶಿಬಿರವನ್ನು ಉದ್ಘಾಟಿಸಿದರು. ಮೊಕ್ತೇಸರರಾದ ಶಿವರಾಮ ಆಚಾರ್ಯ ಉಳಿಯ, ಯೋಗೀಶ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಜೈನ್ ಹೈಸ್ಕೂಲಿನ ಅಧ್ಯಾಪಕ ಹರೀಶ ಆಚಾರ್ಯ ಶುಭ ಹಾರೈಸಿದರು.
ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಎಸ್. ಆಚಾರ್ಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಕಾವ್ಯ ವಂದಿಸಿದರು. ಕಾರ್ಯದರ್ಶಿ ರಶ್ಮಿತಾ ಅರವಿಂದ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಶಿಕ್ಷಕಿ ಯಮುನಾ ಯೋಗೀಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.