ಹೆಬ್ರಿ: ಎಸ್.ಆರ್. ಪಿಯು ಕಾಲೇಜು, ಹೆಬ್ರಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ “ಕಾಂಪಿಟೇಟಿವ್ ಎಕ್ಸಾಂಸ್- ಸಕ್ಸಸ್ ಕೀ” ಎಂಬ ವಿಶೇಷ ಮಾರ್ಗದರ್ಶನ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ ಹೆಚ್. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಜೆಇಇ, ನೀಟ್, ಕೆಸಿಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಶಿಸ್ತು, ಸಮಯ ನಿರ್ವಹಣೆ, ಪಠ್ಯಕ್ರಮದ ಸಮಗ್ರ ಅಧ್ಯಯನ ಹಾಗೂ ನಿರಂತರ ಅಭ್ಯಾಸದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡು ಯೋಜಿತ ರೀತಿಯಲ್ಲಿ ಅಧ್ಯಯನ ನಡೆಸಬೇಕು ಎಂದು ಕರೆ ನೀಡಿದರು.
ಪ್ರಶಾಂತ್ ಕೋಟ ಅವರು ಗಣಿತ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಲು ಅನುಸರಿಸಬೇಕಾದ ತಂತ್ರಗಳು, ಸಮಯ ಉಳಿತಾಯದ ವಿಧಾನಗಳು ಹಾಗೂ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಶಾರ್ಟ್ಕಟ್ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅನಂತಪದ್ಮನಾಭ ಅವರು ರಸಾಯನಶಾಸ್ತ್ರ ವಿಷಯದ ಕುರಿತು ಮಾರ್ಗದರ್ಶನ ನೀಡಿ, ಪಠ್ಯಕ್ರಮವನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವ ವಿಧಾನ, ಪ್ರಮುಖ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯತೆ ಹಾಗೂ ಪರೀಕ್ಷಾ ಸಿದ್ಧತೆಯ ಕಾರ್ಯತಂತ್ರಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥರಾದ ವಿನಾಯಕ, ರಾಕೇಶ್ ಮತ್ತು ಶುಭಾಲಕ್ಷ್ಮೀ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾ ಪ್ರಭು ನಿರೂಪಿಸಿ ಮತ್ತು ಶುಭಾಲಕ್ಷ್ಮೀ ನಿರ್ವಹಿಸಿದರು.
