ಕಳೆದ 2 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾಣೂರು ಗ್ರಾ.ಪಂ. ಮತ್ತು ಕಾಂತಾವರ ಗ್ರಾ.ಪಂ. ವ್ಯಾಪ್ತಿಯ 698.500 ಕಿ. ಮೀ ನಿಂದ 744.190 ಕಿ.ಮೀ.ವರಗಿನ 3.6381 ಹೆಕ್ಟರ್ ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿಗೆ ರಾಜ್ಯ ಸರ್ಕಾರದ ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯಿಂದ ಅನುಮತಿ ದೊರಕಿಸಲು ಉಡುಪಿ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಯಶಸ್ವಿಯಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಈ ಪ್ರದೇಶದಲ್ಲಿ ಬರುವ ಮರಗಳನ್ನು ಕಟಾವು ಮಾಡಿ ಕಾಮಗಾರಿ ನಡೆಸಲು ಅರಣ್ಯ ಇಲಾಖೆಯಿಂದ ಕಾರ್ಯಾದೇಶ ದೊರಕಿರುತ್ತದೆ .
ಸಾಣೂರು ಬೈಪಾಸ್ ಸರ್ಕಲ್ ನಿಂದ ಮುರತಂಗಡಿಯಲ್ಲಿರುವ ಸಾಣೂರು ಪದವಿ ಪೂರ್ವ ವಿದ್ಯಾಲಯದವರೆಗೆ ಬಹುತೇಕ ಹೆಚ್ಚಿನ ಕಾಮಗಾರಿಗಳು ಮುಗಿದಿದ್ದು, ಆ ಬಳಿಕದ ಚಿಲಿಂಬಿ ಗುಡ್ಡ ಪರಿಸರದ ಹೆದ್ದಾರಿ ಕಾಮಗಾರಿಯು ಕಳೆದ 2 ವರ್ಷಗಳಿಂದ ಅರಣ್ಯ ಇಲಾಖೆಯಿಂದ ಅನುಮತಿ ದೊರಕದೆ ಹೆದ್ದಾರಿ ಯೋಜನೆಗೆ ತೀವ್ರ ತೊಡಕುಂಟಾಗಿತ್ತು.
ರಾಜ್ಯ ಅರಣ್ಯ ಸಚಿವರಿಗೆ ಮತ್ತು ಅರಣ್ಯ ಇಲಾಖೆಗೆ ಮಾನ್ಯ ಸಂಸದರು ಹಲವಾರು ಬಾರಿ ಪತ್ರ ಬರೆದು ಮುಖತಹ ಭೇಟಿಯಾಗಿ ಅರಣ್ಯ ಭಾಗದ ಕಾಮಗಾರಿಗಳಿಗಿದ್ದ ತಾಂತ್ರಿಕ ತೊಡಕುಗಳನ್ನು ನಿವಾರಿಸಲು ನಿರಂತರ ಪ್ರಯತ್ನದ ಫಲವಾಗಿ ಇದೀಗ ಹೆದ್ದಾರಿ ಇಲಾಖೆ ಶೀಘ್ರವಾಗಿ ಮರಗಳ ಕಟಾವು ನಡೆಸಿ ಒಂದು ವರ್ಷದೊಳಗೆ ಕಾಮಗಾರಿ ಪೂರ್ತಿಗೊಳಿಸಲು ದಾರಿ ಸುಗಮವಾಗಿದೆ.
ಕೋಟ ಶ್ರೀನಿವಾಸ ಪೂಜಾರಿಯವರು ಸಂಸದರಾದ ಬಳಿಕ ಸಾಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಗಾಗ್ಗೆ ತಲೆದೋರಿದ ಹಲವಾರು ಸಮಸ್ಯೆಗಳ ನಿವಾರಣೆ ಮತ್ತು ಕಾಮಗಾರಿ ಪ್ರಗತಿಗಾಗಿ 3 ಬಾರಿ ಸ್ವತಃ ಭೇಟಿ ನೀಡಿ ಪರಿಶೀಲಿಸಿ ಕಾರ್ಕಳದ ಸಾಮರ್ಥ್ಯ ಸೌಧ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಗುತ್ತಿಗೆದಾರರ ಮತ್ತು ಹೆದ್ದಾರಿ ಅಧಿಕಾರಿಗಳ ಸಭೆ ನಡೆಸಿ ಹಲವಾರು ತೊಡಕುಗಳನ್ನು ನಿವಾರಿಸಿ ಹೆದ್ದಾರಿ ಕಾಮಗಾರಿ ಸರಾಗವಾಗಿ ನಡೆಯುವಂತೆ ನಿರ್ದೇಶನ ನೀಡಿದ್ದರು.
ಈ ಬಗ್ಗೆ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಮತ್ತು ಸಾಣೂರು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು ವಿಶೇಷ ಅಭಿನಂದನೆ ಸಲ್ಲಿಸಿರುತ್ತಾರೆ.
