ಕಾರ್ಕಳ: ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಸ್ತ್ರೀ ವೇಷಧಾರಿ ಶಶಿಕಾಂತ್ ಶೆಟ್ಟಿ ದೀಪ ಬೆಳಗುವುದರ ಮೂಲಕ 2026-27ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ತರಬೇತಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಹಚ್ಚುವ ದೀಪ ಒಂದುಕಡೆ ಇದ್ದರೆ ಅದರ ಬೆಳಕು ಮಾತ್ರ ಎಲ್ಲಾ ಕಡೆ ಪಸರಿಸುತ್ತದೆ. ಮಕ್ಕಳು ವಿವಿಧ ಕಲೆಗಳಲ್ಲಿ ಪಾರಂಗತರಾಗಿ ಈ ಸಮಾಜದಲ್ಲಿ ಪ್ರಜ್ವಲಿಸುವ ದೀಪಗಳಾಗಬೇಕು. ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ವಿವಿಧ ಕಲೆಗಳು ಉದ್ದೀಪನಗೊಳ್ಳಲು ಅವಕಾಶ ಮಾಡಿಕೊಡಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಕಂಬಳ ಕ್ಷೇತ್ರದ ಭೀಷ್ಮ, ಮೂಡಬಿದ್ರೆ ಜೈನ್ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ ಗುಣಪಾಲ ಕಡಂಬರವರು ಮಾತನಾಡಿ, “ದೇಹವನ್ನು ಗೇಯಕ್ಕೆ ಸಮರ್ಪಿಸಿದಾಗ ಮಾತ್ರ, ನಾವು ಅಂದುಕೊಂಡ ಕಾರ್ಯ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡುತ್ತಿರುವುದು ಸಂತಸದ ವಿಚಾರ” ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಹಪಠ್ಯ ಚಟುವಟಿಕೆಗಳ ತರಬೇತುದಾರರಾದ ಸುಬ್ರಹ್ಮಣ್ಯ ನಾವಡ(ಭರತನಾಟ್ಯ), ರಾಯಿಸ್ಟನ್(ಬ್ಯಾಂಡ್), ಸತೀಶ್ ಬೆಳ್ಮಣ್(ಕರಾಟೆ), ಉಮಾನಾಥ ಕಾಪು (ಚೆಸ್), ಜೇಸನ್ ರೆಬೆಲ್ಲೊ( ಕೀಬೊರ್ಡ್), ಸತೀಶ್ ಮಡಿವಾಳ(ಯಕ್ಷಗಾನ), ದುರ್ಗೇಶ್(ಚೆಂಡೆ), ವಿದ್ವಾನ್ ಯಶವಂತ್ ಎಂ ಜಿ (ಶಾಸ್ತ್ರೀಯ ಸಂಗೀತ) ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ರವರು ಮಾತನಾಡಿ “ಮಕ್ಕಳ ಶಿಕ್ಷಣ ಭತ್ತ ತುಂಬುವ ಚೀಲವಾಗದೆ ಭತ್ತ ಬೆಳೆಯುವ ಗದ್ದೆಯಂತೆ ಆಗಬೇಕು. ಅಲ್ಲದೆ ಒಂದು ಮರ ಚೆಂದ ಕಾಣಲು ಕೇವಲ ಕಾಂಡವೊಂದಿದ್ದರೆ ಸಾಲದು ಅದರಲ್ಲಿ ಹೂ, ಹಣ್ಣು, ಕಾಯಿಗಳು ಇದ್ದಾಗ ಮಾತ್ರ ಅದು ನೋಡಲು ಸುಂದರವಾಗಿರುತ್ತದೆ. ಅಂತೆಯೇ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಹಪಠ್ಯ ಚಟುವಟಿಕೆಗಳು ಇದ್ದಾಗ ಮಾತ್ರ ಮಗುವಿನ ಸಂಪೂರ್ಣ ಕಲಿಕೆ ಸಾಧ್ಯ” ಎಂದು ಹೇಳಿದರು.
ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಐ ಕ್ರಿಸ್ಟೋಫರ್ ಕೋಟ್ಯಾನ್ರವರು ಪ್ರಸ್ತಾವನೆಗೈದು ಸ್ವಾಗತಿಸಿದರು. ಪದವಿ ಪೂರ್ವ ವಿಭಾಗದ ಪ್ರಾಚಾರ್ಯರಾದ ಲಕ್ಷ್ಮೀನಾರಾಯಣ ಕಾಮತ್, ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಜಾಲಿ ಜೇಕಬ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಶ್ರೀಮತಿ ಜಯಲಕ್ಷ್ಮೀ ಹಾಗೂ ಶ್ರೀಮತಿ ಶೈಲಿ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದ್ದರು. ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಉಮೇಶ್ ಬೆಳ್ಳಿಪಾಡಿ ಕಾರ್ಯಕ್ರಮ ನಿರೂಪಿಸಿ, ಪ್ರಾಥಮಿಕ ವಿಭಾಗದ ಸಹಶಿಕ್ಷಕಿಯಾದ ಶ್ರೀಮತಿ ದೀಪ್ತಿ ವಂದಿಸಿದರು.
