ಹೆಬ್ರಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಲ್ಲಾಡಿ ವಲಯದ ಶ್ರೀದೇವಿ ಸ್ವ-ಸಹಾಯ ಸಂಘದ ೨೫ನೇ ವರ್ಷದ ವಾರ್ಷಿಕೋತ್ಸವವು ಸ್ವಸಹಾಯ ಸಂಘದ ಸದಸ್ಯರಾದ ಭಾರತಿ ಯವರ ಸ್ವಗೃಹದಲ್ಲಿ ಜರುಗಿತು.
ಸಂಘದ ವಾರ್ಷಿಕೋತ್ಸವದ ಅಂಗವಾಗಿ ಮೊದಲು ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರಕ್ಕೆ ಪೂಜೆ, ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹೆಬ್ರಿ ತಾಲೂಕು ಯೋಜನಾಧಿಕಾರಿ ರೇಷ್ಮಾ, ಮುದ್ರಾಡಿಯ ಹಿರಿಯ ಸಮಾಜ ಸೇವಕರಾದ ಗಣಪತಿ ಎಂ, ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ , ಹಿರಿಯರಾದ ಲೋಕಯ್ಯ ಹಾಂಡ,ಸಂಘದ ಅಧ್ಯಕ್ಷರಾದ ಯೋಗೀಶ್ ಪಾಲ್ಗೊಂಡು ಸ್ವಸಹಾಯ ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿ, ಶುಭ ಹಾರೈಸಿದರು.
ಒಕ್ಕೂಟದ ಅಧ್ಯಕ್ಷರಾದ ಯೋಗೀಶ್ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಮಟ್ಟದಲ್ಲಿ ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ಸೇವೆ ಸಲ್ಲಿಸುತ್ತಿರುವ ಬಲ್ಲಾಡಿ ಉದಯ ಕುಲಾಲ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಅವರನ್ನು ಸಂಘದ ವತಿಯಿಂದ ಹಾರ, ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಂಘದ 25 ವರ್ಷದ ಪಯಣದ ಯಶಸ್ಸಿಗೆ ಕಾರಣರಾದ ಎಲ್ಲಾ ಸದಸ್ಯರನ್ನು ಅಧ್ಯಕ್ಷರು ಅಭಿನಂದಿಸಿದರು. ಸಂಘದ ಸದಸ್ಯರಾದ ಮಮತಾ ಕುಲಾಲ್ ಸ್ವಾಗತಿಸಿ, ಸೇವಾಪ್ರತಿನಿಧಿ ಮಮತಾ ವಂದಿಸಿದರು. ಮುದ್ರಾಡಿ ವಲಯದ ಮೇಲ್ವಿಚಾರಕರಾದ ಉಮೇಶ್ ಬಿ. ಕೆ. ಕಾರ್ಯಕ್ರಮ ನಿರೂಪಿಸಿದರು.
