ಬೆಳುವಾಯಿ ಪೇಟೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಂಡರ್ ಪಾಸ್ ನಲ್ಲಿ ವಾಹನ ನಿಲುಗಡೆ ನಿಷೇಧಿಸಿರುವ ಬಗ್ಗೆ ಸ್ಥಳೀಯ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಳುವಾಯಿ ಪೇಟೆಯಲ್ಲಿ ಹೆದ್ದಾರಿ ಇಲಾಖೆಯ ವತಿಯಿಂದ ಮೇಲು ಹಾದಿ (ರಾ.ಹೆ 169) ನಿರ್ಮಿಸಲಾಗಿದೆ ಹಾಗೆಯೇ ಅದರ ಅಡಿಯಲ್ಲಿ ರಸ್ತೆ ಅಡ್ಡ ಪ್ರವೇಶಿಸಲು 45 ಮೀಟರ್ ಕೆಳ ಹಾದಿಯನ್ನು ನಿರ್ಮಿಸಲಾಗಿದೆ.
ಹೆದ್ದಾರಿ ಅಭಿವೃದ್ಧಿಯ ನಂತರ ಬೆಳುವಾಯಿ ಪೇಟೆಯಲ್ಲಿ ವಾಹನಗಳ ಪಾರ್ಕಿಂಗ್ ಗೆ ಜಾಗ ಇಲ್ಲದ ಕಾರಣ ಈ ಕೆಳ ಹಾದಿಯಲ್ಲಿ (ಅಂಡರ್ ಪಾಸ್) ಪ್ರಾರಂಭದಿಂದಲೂ ಆಟೋರಿಕ್ಷಾ, ಟೆಂಪೊಗಳು, ದ್ವಿಚಕ್ರ ವಾಹನಗಳು ಮತ್ತು ಕಾರುಗಳು ನಿಲ್ಲುತ್ತಿದ್ದವು.
ಕೆಲವು ದಿನಗಳ ಹಿಂದೆ ಪಂಚಾಯತ್ ವತಿಯಿಂದ ಇಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂಬ ಬೋರ್ಡ್ ಅಳವಡಿಸಲಾಗಿದೆ.
ಒಂದೆರಡು ದಿನಗಳಿಂದ ಇಲ್ಲಿ ನಿಲ್ಲಿಸಿರುವ ಸಾರ್ವಜನಿಕರ ಸ್ಕೂಟರ್ ಮತ್ತು ಬೈಕುಗಳನ್ನು ಪಂಚಾಯತ್ ಸೂಚನೆಯಂತೆ ಮೂಡುಬಿದ್ರಿ ಪೊಲೀಸ್ ಠಾಣೆಯವರು ಪೂರ್ವ ಸೂಚನೆ ನೀಡದೆ ಪಂಚಾಯತಿನ ಮತ್ತು ಇತರ ಟೆಂಪೊಗಳಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಆದರೆ ರಿಕ್ಷಾ ಟೆಂಪೋ ಗಳನ್ನು ಬಿಟ್ಟು ಹೋಗಲಾಗಿದೆ. ಅಂದರೆ ಇದೆ ಜಾಗದಲ್ಲಿ ನಿಲ್ಲಿಸುತ್ತಿರುವ ರಿಕ್ಷಾ ಮತ್ತು ಟೆಂಪೋಗಳಿಗೆ ವಾಹನ ನಿಲುಗಡೆ ನಿಷೇಧದ ಕಾನೂನು ಅನ್ವಯಿಸುವುದಿಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ವಾಹನ ನಿಲುಗಡೆ ನಿಷೇಧದಿಂದ ಮುಖ್ಯವಾಗಿ ದೂರದ ಊರುಗಳಿಂದ ಬಂದು ಇಲ್ಲಿ ವಾಹನಗಳನ್ನು ನಿಲ್ಲಿಸಿ ಮಂಗಳೂರು, ಉಡುಪಿ ಕಡೆಗೆ ಬಸ್ಸುಗಳಲ್ಲಿ ಹೋಗುತ್ತಿರುವ ಅಮಾಯಕ ಬಡ ವಿದ್ಯಾರ್ಥಿಗಳಿಗೆ ಮತ್ತು ಇತರರಿಗೆ ತುಂಬಾ ತೊಂದರೆಗಳು ಆಗುತ್ತಿದೆ.
ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದರೆ ಯಾವುದೇ ತರದ ವಾಹನಗಳನ್ನು ಅಲ್ಲಿ ನಿಲ್ಲಿಸಬಾರದು. ಒಂದು ವೇಳೆ ಕೆಲವರಿಗೆ ಮಾತ್ರ ಅವಕಾಶ ಮಾಡಿಕೊಟ್ಟರೆ ಇದು ನ್ಯಾಯ ಸಮತವಲ್ಲ ಅಲ್ಲವೇ ಎಂಬುದು ಸ್ಥಳೀಯರ ಅಭಿಪ್ರಾಯ.
ಹೆದ್ದಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯವರೊಂದಿಗೆ ಚರ್ಚಿಸಿ ಬೆಳುವಾಯಿ ಪೇಟೆಯಲ್ಲಿ ವಾಹನ ನಿಲುಗಡೆಗೆ ಸೂಕ್ತ ಜಾಗವನ್ನು ಗುರುತಿಸಿ ಪರಿಹಾರವನ್ನು ಕಂಡುಕೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
