ಕಾರ್ಕಳ : ಕನ್ನಡ ಭಾಷೆ ಸಾಹಿತ್ಯದ ಓದು ಮತ್ತು ಅಭಿವೃದ್ದಿಯನ್ನು ಧ್ಯೇಯವಾಗಿಟ್ಟುಕೊಂಡು ನಾಡಿನ ಶ್ರೇಷ್ಠ ಲೇಖಕರ ಕೃತಿಗಳನ್ನು ಓದುಗರಿಗೆ ತಲುಪಿಸುವ ಉದ್ದೇಶದಿಂದ ಕಾರ್ಕಳದ ಕ್ರಿಯೇಟಿವ್ ಪುಸ್ತಕಮನೆ ಅತ್ಯಂತ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಾಹಿತ್ಯ ಪರಂಪರೆಯ ಮುಂದುವರೆದ ಭಾಗವಾಗಿ ಕ್ರಿಯೇಟಿವ್ ಪುಸ್ತಕಧಾರೆ ಎಂಬ ಕಾರ್ಯಕ್ರಮವನ್ನು ಸತತ ಮೂರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮೂರನೇ ಆವೃತ್ತಿಯ ಕಾರ್ಯಕ್ರಮ ಕ್ರಿಯೆಟಿವ್ ಸಪ್ತಸ್ವರ ವೇದಿಕೆಯಲ್ಲಿ ಜು.19 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ ಎಂದು ಕ್ರಿಯೇಟಿವ್ ಕಾಲೇಜಿನ ಸಹಸಂಸ್ಥಾಪಕ ಹಾಗೂ ಪುಸ್ತಕ ಮನೆಯ ರೂವಾರಿ ಅಶ್ವಥ್ ಎಲ್. ಹೇಳಿದರು.
ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ “ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ 2026” ಶಶಿಧರ್ ಹಾಲಾಡಿಯವರ ಕೃತಿ ನದಿ ದಾಟಿ ಬಂದವರು ಪಡೆದುಕೊಂಡಿದೆ.
ಇದರೊಂದಿಗೆ ಇತರೆ ೧೦ ಆಯ್ದ ಕೃತಿಗಳಿಗೂ ಗೌರವ ನೀಡಲಿದ್ದೇವೆ ಎಂದರು.
ಪುಸ್ತಕ ಧಾರೆ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸಾಹಿತ್ಯ, ಓದು, ಸಂಸ್ಕೃತಿ ಹಾಗೂ ಸಮಕಾಲಿನ ಸಾಮಾಜಿಕ ವಿಚಾರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಂಗಳೂರು ವಿ.ವಿ. ಕನ್ನಡ ವಿಭಾಗದ ಹಿರಿಯ ಉಪನ್ಯಾಸಕ ಡಾ.ಧನಂಜಯ ಕುಂಬ್ಳೆ, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 12.15 ರಿಂದ ಯುವಶಕ್ತಿ, ಸಾಹಿತ್ಯ ಮತ್ತು ಮಾಧ್ಯಮ: ರಾಷ್ಟ್ರೀಯತೆಯ ಹೊಸ ಆಯಾಮಗಳು ಎಂಬ ವಿಷಯದಲ್ಲಿ ವಿಶೇಷ ಸಂವಾದ ನಡೆಯಲಿದೆ. ಮಧ್ಯಾಹ್ನದ ಆಟಿಯ ವಿಶೇಷ ಭೋಜನದ ಬಳಿಕ 2.30 ರಿಂದ ಕನ್ನಡದ ಕವಿಶ್ರೇಷ್ಠರ ಅಮರಗೀತೆಗಳ ಸಂಗೀತ ಯಾನ ಭಾವ ನಮನ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಖ್ಯಾತ ಕಾದಂಬರಿಕಾರ ಅನುಬೆಳ್ಳೆ, ಕ್ರಿಯೇಟಿವ್ ವಿದ್ಯಾಸಂಸ್ಥೆಯ ಉಪನ್ಯಾಸಕ ಚಂದ್ರಕಾಂತ್, ಸಿಬ್ಬಂದಿ ನವೀನ್ ಉಪಸ್ಥಿತರಿದ್ದರು.
