ಕಾರ್ಕಳ: 1912ರಲ್ಲಿ ಸ್ಥಾಪನೆಯಾಗಿ 114 ವರ್ಷಗಳ ಸಮರ್ಪಿತ ಸೇವೆಯನ್ನು ಪೂರೈಸಿರುವ ಎಂಸಿಸಿ ಬ್ಯಾಂಕ್ ತನ್ನ ಕಾರ್ಕಳ ಶಾಖೆಯನ್ನು ಆ.26 ರಂದು ಸಾಲ್ಮರ ರಸ್ತೆಯ ಫಾರ್ಚೂನ್ ಆರ್ಕಿಡ್ನ ನೆಲ ಮಹಡಿಯಲ್ಲಿರುವ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿದೆ.
ಎಂಸಿಸಿ ಬ್ಯಾಂಕ್ನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅವರು ನೂತನ ಶಾಖಾ ಕಚೇರಿಯನ್ನು ಉದ್ಘಾಟಿಸಿದರು.
ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಸೇಫ್ ರೂಮ್ನ್ನು ಉದ್ಘಾಟಿಸಿದರು.
ಅತ್ತೂರು ಸಂತ ಲಾರೆನ್ಸ್ ಮೈನರ್ ಬಸಿಲಿಕಾದ ಸಹಾಯಕ ಧರ್ಮಗುರುಗಳಾದ ವಂ. ಫಾ| ರಾಬಿನ್ ಸಾಂಥುಮಾಯರ್ ಅವರು ನೂತನ ಶಾಖಾ ಕಟ್ಟಡವನ್ನು ಆಶೀರ್ವದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ನಂತರ ಮಾತನಾಡಿದ ಅವರು ಗಣ್ಯರು, ನಿರ್ದೇಶಕರು, ಸಿಬ್ಬಂದಿ, ಗ್ರಾಹಕರು ಹಾಗೂ ಹಿತೈಷಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಎಂಸಿಸಿ ಬ್ಯಾಂಕಿನ ಬೆಳವಣಿಗೆಯಲ್ಲಿ ಕಾರ್ಕಳದ ಜನರು ತೋರಿದ ನಿರಂತರ ವಿಶ್ವಾಸ ಮತ್ತು ಸಹಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.
24 ವರ್ಷಗಳ ಹಿಂದೆ ಸ್ಥಾಪನೆಯಾದ ಕಾರ್ಕಳ ಶಾಖೆಯ ಪಯಣವನ್ನು ಸ್ಮರಿಸಿದ ಅವರು, ನೂತನ ಸ್ವಂತ ಕಟ್ಟಡವು ಬ್ಯಾಂಕಿನ ಬೆಳವಣಿಗೆಯ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ೨೦೧೮ರಲ್ಲಿ ಸುಮಾರು ರೂ.೨೦ ಕೋಟಿ ಇದ್ದ ಶಾಖೆಯ ವ್ಯವಹಾರವು ಕೇವಲ ಏಳು ವರ್ಷಗಳಲ್ಲಿ ರೂ. ೫೬ ಕೋಟಿಗೆ ಏರಿಕೆಯಾಗಿದೆ. ಈ ಸಾಧನೆಗೆ ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಹಾಗೂ ಸ್ಥಳೀಯ ಸಮುದಾಯದ ಸಾಮೂಹಿಕ ಪ್ರಯತ್ನವೇ ಕಾರಣ. ಎಂಸಿಸಿ ಬ್ಯಾಂಕ್ ಗ್ರಾಹಕ ಸ್ನೇಹಿ ಸೇವೆಗೆ ಬದ್ಧವಾಗಿದ್ದು, ಪ್ರತಿಯೊಬ್ಬ ಗ್ರಾಹಕರಿಗೂ ವೈಯಕ್ತಿಕ ಗಮನ, ಆತ್ಮೀಯ ಸ್ವಾಗತ ಹಾಗೂ ನಗುಮುಖದ ಸೇವೆ ನೀಡಲು ಶ್ರಮಿಸುತ್ತಿದೆ. ಬ್ಯಾಂಕಿನ ಕಾರ್ಯವೈಖರಿಯ ಮೂಲ ತತ್ವ ಮಾನವೀಯತೆ ಮತ್ತು ಪರರ ಸೇವೆಯಾಗಿದೆ ಎಂದು ಅವರು ಹೇಳಿದರು.
ಸಾಂಪ್ರದಾಯಿಕ ಬ್ಯಾಂಕಿಂಗ್ ಸೇವೆಗಳಾಚೆಯೂ ಎಂಸಿಸಿ ಬ್ಯಾಂಕ್ ಸಮಾಜದ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಅಗತ್ಯವಿರುವವರಿಗೆ ದತ್ತಿ ಚಟುವಟಿಕೆಗಳ ಮೂಲಕ ಆರ್ಥಿಕ ನೆರವು ನೀಡುವುದನ್ನು ಮುಂದುವರಿಸಿದೆ. ಸಂಸ್ಥೆಯ ಬೆಳವಣಿಗೆಯ ಪ್ರಯೋಜನಗಳು ಸಮಾಜದ ವಿಶಾಲ ವರ್ಗಕ್ಕೂ ತಲುಪಬೇಕು. ಬ್ಯಾಂಕಿನ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಅವರು, ಶಾಖಾ ಜಾಲವನ್ನು ಮತ್ತಷ್ಟು ವಿಸ್ತರಿಸುವುದು, ವ್ಯವಹಾರವನ್ನು ಬಲಪಡಿಸುವುದು ಹಾಗೂ ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಸೂಕ್ತ ಸ್ವಂತ ಕಟ್ಟಡಗಳನ್ನು ಹೊಂದುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ ಎಂದು ತಿಳಿಸಿದರು. ಕಾರ್ಕಳದ ಜನರು ಹೊಸ ಶಾಖೆಗೆ ಹೆಚ್ಚಿನ ಗ್ರಾಹಕರನ್ನು ಪರಿಚಯಿಸುವ ಮೂಲಕ ಅದರ ವ್ಯವಹಾರ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಸಹಕರಿಸಬೇಕು ಎಂದು ಅವರು ಕರೆ ನೀಡಿದರು.
ನೂತನ ಕಟ್ಟಡದ ನಿರ್ಮಾಣ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವಾ ಸೇರಿದಂತೆ ಎಲ್ಲರಿಗೂ ಲೋಬೋ ಅವರು ಕೃತಜ್ಞತೆ ಸಲ್ಲಿಸಿದರು. ಕಾರ್ಕಳದ ಜನರು, ಗ್ರಾಹಕರು, ಸಿಬ್ಬಂದಿ ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು.
ವಂ ಫಾ| ರಾಬಿನ್ ಸಾಂಥುಮಾಯರ್ ಅವರು ಎಂಸಿಸಿ ಬ್ಯಾಂಕಿನ ಕಾರ್ಕಳ ಶಾಖೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿ, ಹೊಸ ಸ್ಥಳವು ಕಾರ್ಕಳದ ಜನರನ್ನು ಇನ್ನಷ್ಟು ಉತ್ತಮವಾಗಿ ತಲುಪಲು ಹೊಸ ಅವಕಾಶವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು, ಕೃಷಿಕರು, ಉದ್ಯಮಿಗಳು ಹಾಗೂ ಕುಟುಂಬಗಳ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಣೆ, ಮಾನವೀಯತೆ ಹಾಗೂ ನಗುಮುಖದಿಂದ ಗ್ರಾಹಕರಿಗೆ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು. ಮಂಗಳೂರಿನ ಬ್ಯಾಂಕಿನ ಮುಖ್ಯ ಶಾಖೆಯ ಪಯಣ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಅವರು ಸ್ಮರಿಸಿದರು. ಆರ್ಥಿಕ ಸಂಸ್ಥೆಗಳು ವ್ಯಕ್ತಿಗಳು, ಉದ್ಯಮಗಳು ಮತ್ತು ಸಮುದಾಯಗಳಿಗೆ ಬೆಂಬಲ ನೀಡುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.
ಕಾರ್ಕಳದ ಜನರು ಬ್ಯಾಂಕ್ ಒದಗಿಸುವ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಹೊಸ ಶಾಖೆಯು ಕಾರ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಸೇವೆ ನೀಡುವ ಪ್ರಮುಖ ಕೇಂದ್ರವಾಗಿ ಬೆಳೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ಹೊಸ ಶಾಖೆಯ ಯಶಸ್ಸು, ಸಮೃದ್ಧಿ ಮತ್ತು ನಿರಂತರ ಬೆಳವಣಿಗೆಗಾಗಿ ಪ್ರಾರ್ಥಿಸಿ ದೇವರ ಆಶೀರ್ವಾದ ಕೋರಿದರು.
ಮುಖ್ಯ ಅತಿಥಿ ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಎಂಸಿಸಿ ಬ್ಯಾಂಕಿನ ಕಾರ್ಕಳ ಶಾಖೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಇದು ಬ್ಯಾಂಕಿನ ಸ್ಥಾಪಕರು ಹಾಗೂ ಹಿರಿಯರು ಕಂಡ ಕನಸು ಮತ್ತು ದೂರದೃಷ್ಟಿಯ ಸಾಕಾರವಾಗಿದೆ. ಬ್ಯಾಂಕಿನ ಆಡಳಿತ ಮಂಡಳಿ, ನಿರ್ದೇಶಕರು ಹಾಗೂ ಸದಸ್ಯರ ಸಮರ್ಪಣೆ, ದೃಢಸಂಕಲ್ಪ ಮತ್ತು ಸಾಮೂಹಿಕ ಪ್ರಯತ್ನವನ್ನು ಅವರು ಶ್ಲಾಘಿಸಿದರು. ದೇಶದ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಕ್ಯಾಥೋಲಿಕ್ ಸಮುದಾಯವು ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಹಾಗೂ ಆರ್ಥಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ತುಳು ನಾಡಿನ ಅಭಿವೃದ್ಧಿಯಲ್ಲಿ ಎಂಸಿಸಿ ಬ್ಯಾಂಕ್ ನೀಡುತ್ತಿರುವ ಕೊಡುಗೆಯನ್ನು ಪ್ರಶಂಸಿಸಿದರು. ಗ್ರಾಹಕ ಸ್ನೇಹಿ ಬ್ಯಾಂಕಿಂಗ್ ಸೇವೆಗಳ ಮೂಲಕ ಸಂಸ್ಥೆಯು ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಪ್ರಮುಖ ಕೊಡುಗೆ ನೀಡುತ್ತಿದೆ. ಬ್ಯಾಂಕಿನ ನಿರಂತರ ಬೆಳವಣಿಗೆಗೆ ಉತ್ತಮ ಆಡಳಿತ, ಸಮರ್ಥ ನಾಯಕತ್ವ ಹಾಗೂ ಸದಸ್ಯರು, ಗ್ರಾಹಕರು ಮತ್ತು ಹಿತೈಷಿಗಳ ಅಚಲ ವಿಶ್ವಾಸವೇ ಕಾರಣ. ಅಧ್ಯಕ್ಷರಾದ ಅನಿಲ್ ಲೋಬೋ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಪರಿಣಾಮಕಾರಿ ಆಡಳಿತ ಸಾಮರ್ಥ್ಯವನ್ನು ಪ್ರಶಂಸಿಸಿದರು. ಬ್ಯಾಂಕಿನ ಬೆಳವಣಿಗೆ ಹಾಗೂ ಹೊಸ ಶಾಖಾ ಕಟ್ಟಡದ ಅಭಿವೃದ್ಧಿಯಲ್ಲಿ ಅವರ ಬದ್ಧತೆಯನ್ನು ಶ್ಲಾಘಿಸಿದರು. ಬ್ಯಾಂಕಿಗೆ ವಿವಿಧ ಕ್ಯಾಥೋಲಿಕ್ ಸಂಸ್ಥೆಗಳು ನೀಡುತ್ತಿರುವ ಬೆಂಬಲ ಮತ್ತು ಪ್ರೋತ್ಸಾಹವನ್ನು ಅವರು ಗುರುತಿಸಿದರು. ಸಮಾಜದ ಕಲ್ಯಾಣಕ್ಕಾಗಿ ಬಲಿಷ್ಠ ಸಂಸ್ಥೆಗಳನ್ನು ನಿರ್ಮಿಸಲು ಏಕತೆ, ಸಹಕಾರ ಮತ್ತು ಸಾಮೂಹಿಕ ಹೊಣೆಗಾರಿಕೆ ಅಗತ್ಯ ಎಂದು ಹೇಳಿದರು.
ಗೌರವ ಅತಿಥಿ ಮಾಡೆಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಸಂಸ್ಥಾಪಕ ಅಧ್ಯಕ್ಷರಾದ ಜಾನ್ ಡಿಸಿಲ್ವಾ ಅವರು ಎಂಸಿಸಿ ಬ್ಯಾಂಕಿನ ಕಾರ್ಕಳ ಶಾಖೆಯ ನೂತನ ಕಟ್ಟಡದ ಉದ್ಘಾಟನೆಗೆ ಅಭಿನಂದನೆ ಸಲ್ಲಿಸಿ, ಬ್ಯಾಂಕಿನ ನಿರಂತರ ಯಶಸ್ಸಿಗೆ ಶುಭ ಹಾರೈಸಿದರು. ಬ್ಯಾಂಕಿನ ಭವಿಷ್ಯದ ಬೆಳವಣಿಗೆಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಉದ್ಯೋಗಾವಕಾಶಗಳು ಸೀಮಿತವಾಗಿರುವ ಸಂದರ್ಭದಲ್ಲಿ ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಬ್ಯಾಂಕ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ಜನರು ಎಂಸಿಸಿ ಬ್ಯಾಂಕ್ ಒದಗಿಸುವ ಬ್ಯಾಂಕಿಂಗ್ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಗೌರವ ಅತಿಥಿಗಳಾಗಿ ನಿವೃತ್ತ ಡ್ಯಾನ್ವೇ ಮೆಕ್ಯಾನಿಕಲ್ ಆಂಡ್ ಎಂಜಿನಿಯರಿಂಗ್, ಯುಎಇಯ ಲ್ಯಾನ್ಸ್ ಲಾರ್ಡ್ ಜೋಸಿ ಲೋಬೋ ಹಾಗೂ ವಕೀಲರಾದ ಶೇಖ್ ಅಬ್ದುಲ್ ಶರೀಫ್, ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವಾ, ಪ್ರಧಾನ ವ್ಯವಸ್ಥಾಪಕರಾದ ಸುನಿಲ್ ಮಿನೆಜಸ್ ಹಾಗೂ ಶಾಖಾ ವ್ಯವಸ್ಥಾಪಕರಾದ ರೋಹನ್ ಜಾಯ್ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮುದಾಯದೊಂದಿಗೆ ತನ್ನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಎಂಸಿಸಿ ಬ್ಯಾಂಕ್ ಕಾರ್ಕಳ ಶಾಖೆಯ ಗ್ರಾಹಕರಾದ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಇತರ ಪ್ರತಿಭಾವಂತರನ್ನು ಸನ್ಮಾನಿಸಿತು. ಪ್ರಥಮ ಮಹಿಳಾ ವಾಣಿಜ್ಯ ಪೈಲಟ್ ಆಗಿ ಸಾಧನೆ ಮಾಡಿದ ಶ್ರೀಮತಿ ಶೈನಿ ಅಶ್ಮಾ ಸಾಲ್ದಾನ್ಹಾ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು. 2022ರಲ್ಲಿ ಕಾರ್ಕಳ ಶಾಖೆಯ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದವರನ್ನೂ ಸನ್ಮಾನಿಸಲಾಯಿತು. ವಿಶೇಷ ಜನ್ಮದಿನಗಳನ್ನು ಆಚರಿಸುತ್ತಿರುವ ಗ್ರಾಹಕರನ್ನು ಸಹ ಅಭಿನಂದಿಸಿ ಗೌರವಿಸಲಾಯಿತು.
ನೂತನ ಕಟ್ಟಡದ ಮಾಲೀಕರ ಪರವಾಗಿ ಫಾರ್ಚೂನ್ ಪ್ರೊಮೋಟರ್ಸ್ ಪಾಲುದಾರರಾದ ಡೆನಿಸ್ ಪೆರೇರಾ ಅವರನ್ನು ಎಲ್ಲ ಪಾಲುದಾರರ ಪರವಾಗಿ ಅವರ ಕೊಡುಗೆ ಮತ್ತು ಸಹಕಾರಕ್ಕಾಗಿ ಸನ್ಮಾನಿಸಲಾಯಿತು.
ನಿರ್ದೇಶಕರಾದ ಆಂಡ್ರ್ಯೂ ಡಿಸೋಜಾ, ಡೇವಿಡ್ ಡಿಸೋಜಾ, ಅನಿಲ್ ಪತ್ರಾವೊ, ರೋಶನ್ ಡಿಸೋಜಾ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಪಿ. ಮೊಂತೇರೊ, ಸಿ.ಜಿ. ಪಿಂಟೋ ಹಾಗೂ ಬ್ಯಾಂಕಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಹಾಗೂ ಗೌರವ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಗೀತೆ, ಸಿಬ್ಬಂದಿಯಿಂದ ಪ್ರಾರ್ಥನಾ ಗೀತೆ ಹಾಗೂ ಎಂಸಿಸಿ ಬ್ಯಾಂಕಿನ ಇತಿಹಾಸ ಮತ್ತು ಸಾಧನೆಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವಾ ಸ್ವಾಗತಿಸಿದರು. ಕಾರ್ಕಳ ಶಾಖೆಯ ವ್ಯವಸ್ಥಾಪಕರಾದ ರೋಹನ್ ಜೆ. ಪಿಂಟೋ ವಂದಿಸಿದರು. ಎಲ್ಸನ್ ಹಿರ್ಗಾನ್ ಕಾರ್ಯಕ್ರಮವನ್ನು ನಿರೂಪಿಸಿದರು.
