ಮೂಡುಬಿದಿರೆ : ಮೂಡುಬಿದಿರೆ ಜೈನ್ ಮಿಲನ್ನ ಮಾಸಿಕ ಸಭೆಯು ಆ.23ರಂದು ಸೌಟ್ಸ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆಯ ಮಹಾಕವಿ ರತ್ನಾಕರವರ್ಣಿ ಸಭಾಭವನದಲ್ಲಿ ಜರಗಿತು.
ಮಹಾಕವಿ ರತ್ನಾಕರವರ್ಣಿ ಸಂಸ್ಮರಣ ಉಪನ್ಯಾಸ ಮತ್ತು ಆರೋಗ್ಯ ತಪಸಣಾ ಶಿಬಿರದ ಪ್ರಯುಕ್ತ ನಡೆದ ಸಭಾಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲೇಖರು ಮತ್ತು ವಿಮರ್ಶಕರಾದ ಟಿ.ಎ.ಎನ್ ಖಂಡಿಗೆ ಇವರು ರತ್ನಾಕರವರ್ಣಿಯ “ನುಡಿ ಬೆಳಕು” ಎಂಬ ವಿಷಯ ಬಗ್ಗೆ ಮಾತನಾಡುತ್ತಾ ರತ್ನಾಕರವರ್ಣಿ ಮೂಡುಬಿದಿರೆಯ ಸಾಹಿತ್ಯಕ ಸಂಪತ್ತು ಎಂದರು. 18 ಬಸದಿಗಳು, 18 ಕೆರೆಗಳು ಮತ್ತು 18 ದೇವಸ್ಥಾನಗಳು ಮೂಡುಬಿದಿರೆಯ ಚಾರಿತ್ರಿಕ ಸಂಪತ್ತು ಇದರ ಜೊತೆಗೆ ಸೇರಿಸಬೇಕಾದ ಇನ್ನೊಂದು ಸಾಹಿತ್ಯಕ ಸಂಪತ್ತು ಎಂದರೆ ರತ್ನಾಕರ ವರ್ಣಿ. 1955ರಲ್ಲಿ ತ.ಸು ಶಾಮರಾಯ ಸಂಪಾದನೆ ಮಾಡಿದ ಭರತೇಶ ವೈಭವ ಸಂಗ್ರಹದ ಮುನ್ನಡಿಯಲ್ಲಿ ಕುವೆಂಪು ಅವರು “ಭರತೇಶ ವೈಭವದಂಥ ಕಾವ್ಯ ಪಾಶ್ಚಾತ್ಯ ಪೌರಾಸ್ತ್ರಗಳಲ್ಲಿ ಬೇರೊಂದು ಇಲ್ಲ” ಎಂದು ಹೇಳಿದ್ದಾರೆ. ಕನ್ನಡ ಸಾಹಿತ್ಯದ ನಾಲ್ಕು ನಾಯಕ ರತ್ನಗಳಲ್ಲಿ ಭರತನೊಬ್ಬ ಎಂದು 1968ರಲ್ಲಿ ಧಾರವಾಡ ವಿ.ವಿ.ಯಲ್ಲಿ ಮಾಡಿದ ಭಾಷಣದಲ್ಲಿ ಬೇಂದ್ರೆಯವರು ಹೇಳಿದ್ದಾರೆ. ಸಮೃದ್ಧಿ ಮತ್ತು ಸರಳತೆ, ಕರ್ಮದಿಂದ ಧ್ಯಾನಕ್ಕೆ ಚಲಿಸುವ ಕ್ರಮ, ಅಹಿಂಸಾ ಮಾರ್ಗದ ಮೂಲಕ ಮಾಡುವ ಪರಿವರ್ತನೆ ಸಂಸಾರ ಜೀವನದ ರಸ. ಪ್ರಸಂಗಗಳು. ನಿಜವಾದ ಸುಖಿ ಯಾರು ಮೊದಲಾದ ವಿಚಾರಗಳನ್ನು ರತ್ನಾಕರ ವರ್ಣಿಯ ಕಾವ್ಯದ ದೃಷ್ಟಾಂತಗಳ ಮೂಲಕ ವಿವರಿಸಿದರು.
ವೀರ್ ಶ್ರೀಪಾಲ್ ಎಸ್.ರವರು ರತ್ನಾತರವರ್ಣಿ ಪುತ್ಥಳಿ ಸ್ಥಾಪನೆಯ ಬಗ್ಗೆ ಸವಿವಿವರವಾದ ಮಾಹಿತಿಯನ್ನು ಸಭೆಯ ಮುಂದಿಡುತ್ತಾ ರತ್ನಾಕರವರ್ಣಿ ಸ್ಮೃತಿಮಂಟಪ ನಿರ್ವಹಣೆಗಾಗಿ ರೂ. ಒಂದುಲಕ್ಷದ ಮೊತ್ತವನ್ನು ನಿರಖ ಠೇವಣಿಯಾಗಿ ಇರಿಸಿದ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾದ ಭಾರತೀಯ ಜೈನ್ ಮಿಲನ್ ವಲಯ-8ರ ಉಪಾಧ್ಯಕ್ಷರಾದ ವೀರ್ ಸುದರ್ಶನ್ ಜೈನ್ ಮಾತನಾಡಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಿಲನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಕ್ರಿಕೇಟ್ ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಜೈನ್ ಬಾಂಧವರ ಸದಸ್ಯತ್ವ ಅಭಿಯಾನಕ್ಕೆ ಇದೇ ಸಂದರ್ಭ ಚಾಲನೆ ನೀಡಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಮಿಲನ್ ಅಧ್ಯಕ್ಷರಾದ ವೀರ್ ಮಹೇಂದ್ರ ಕುಮಾರ್ ಜೈನ್ರವರು ತಮ್ಮ ಕಾರ್ಯಚಟುವಟಿಕೆಗಳಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಯಶ್ವಸಿಗೆ ಸಹಕರಿಸಿದ ಅತಿಥೇಯ ವೃಂದರವರ ಸಹಕಾರವನ್ನು ಸ್ಮರಿಸಿದರು. ಜೈನ್ ಬಾಂಧವರ ಸದಸ್ಯತ್ವ ಅಭಿಯಾನಕ್ಕೆ ಸರ್ವರ ಸಹಕಾರ ಕೋರಿದರು.
ಮಿಲನ್ ವತಿಯಿಂದ ಟಿ.ಎ.ಎನ್ ಖಂಡಿಗೆ, ವೈದ್ಯಾಧಿಕಾರಿ ಡಾ| ಅಕ್ಷತಾ, ವೀರ್ ಸುದರ್ಶನ್ ಜೈನ್ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಲಯ ನಿರ್ದೇಶಕರಾದ ವೀರ್ ಜಯರಾಜ ಕಂಬಳಿ, ವಲಯ ಉಪ ಕಾರ್ಯದರ್ಶಿ ವೀರಾಂಗನಾ ಶ್ವೇತಾ ಜೈನ್ ಉಪಸ್ಥಿತರಿದ್ದರು.
ಪ್ರಮೇಯ ಮತ್ತು ಸೌಜನ್ಯ ಇವರ ಪಂಚ ನಮಸ್ಕಾರ ಪ್ರಾರ್ಥಿಸಿದರು. ವೀರ್ ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಜುಲೈ ತಿಂಗಳ ಮಾಸಿಕ ವರದಿಯನ್ನು ಕಾರ್ಯದರ್ಶಿ ವೀರ್ ಶಶಿಕಾಂತ ಎಳನೀರುರವರು ವಾಚಿಸಿದರು. ಮುಂದಿನ ಮಾಸಿಕ ಸಭೆಯು ಅತಿಥೇಯರ ಪಟ್ಟಿಯನ್ನು ಕೋಶಾಧಿಕಾರಿ ವೀರ್ ಶ್ರೇಯಾಂಸ ಹೆಗ್ಡೆಯವರು ವಾಚಿಸಿದರು. ವೀರ್ ಎಸ್. ದಿನೇಶ್ ಚೌಟ, ವೀರ್ ಪೂರ್ಣಚಂದ್ರ ಜೈನ್ರವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ವೀರ್ ಅನಂತ ವೀರ್ ಜೈನ್ರವರು ಧನ್ಯವಾದವಿತ್ತರು. ವೀರಾಂಗನಾ ಚೇತನಾ ಪ್ರಶಾಂತ್ರವರು ಕಾರ್ಯಕ್ರಮ ನಿರೂಪಿಸಿದರು. ವೀರ್ ನಾಗರಾಜ ಇಂದ್ರರವರ ಶಾಂತಿ ಮಂತ್ರ ಪಠಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಮೂಡುಬಿದಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗತ್ವದಲ್ಲಿ ವೈದ್ಯಾಧಿಕಾರಿ ಡಾ| ಅಕ್ಷತಾ ಇವರ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಸುಮಾರು 150ಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದಿರುತ್ತಾರೆ. ಮುಂಜಾನೆ ಜೈನ್ಪೇಟೆ ದಿಗಂಬರ ಜೈನ ಅನುದಾನಿತ ಹಿ. ಪ್ರಾ. ಶಾಲಾ ಆವರಣದಲ್ಲಿರುವ ರತ್ನಾಕರವರ್ಣಿಯ ಪುತ್ಥಳಿಕೆ ಮಿಲನ್ ಅಧ್ಯಕ್ಷರಾದ ವೀರ್ ಮಹೇಂದ್ರ ಕುಮಾರ್ ಜೈನ್ರವರು ಹೂ ಹಾರ ಹಾಕಿ ಗೌರವ ಸಮರ್ಪಿಸಿದರು.
