ಹೆಬ್ರಿ : ವಿದ್ಯಾರ್ಥಿಗಳಲ್ಲಿರುವ ವಿವಿಧ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಹೆಬ್ರಿಯ ಎಸ್.ಆರ್.ಪಿ.ಯು. ಕಾಲೇಜಿನಲ್ಲಿ ” ಅನ್ವೇಷಣಂ 2026 – ಇನ್ ಸರ್ಚ್ ಆಫ್ ಟ್ಯಾಲೆಂಟ್ಸ್” ಎಂಬ ಪ್ರತಿಭಾನ್ವೇಷಣಾ ಕಾರ್ಯಕ್ರಮ ಜರಗಿತು.
ಖ್ಯಾತ ವಾಗ್ಮಿ, ಕುಂದಾಪುರದ ಮನು ಹಂದಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳು ಕೇವಲ ಅಕ್ಷರವಂತರಾಗುವುದಕ್ಕಿಂತ ಸರಿಯಾದ ಅರ್ಥದಲ್ಲಿ ವಿದ್ಯಾವಂತರಾಗಬೇಕು. ತಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡು, ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯದ ಬೆಳವಣಿಗೆಯಲ್ಲಿ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ” ಎಂದು ಕರೆ ನೀಡಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ನಾಗರಾಜ್ ಶೆಟ್ಟಿ, “ವಿದ್ಯಾರ್ಥಿಗಳಲ್ಲಿರುವ ಸಾಂಸ್ಕೃತಿಕ, ಸೃಜನಾತ್ಮಕ ಹಾಗೂ ಕಲಾತ್ಮಕ ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇಂತಹ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಉತ್ತೇಜನ ನೀಡುವ ನಿರಂತರ ಪ್ರಯತ್ನವನ್ನು ಕಾಲೇಜು ಮಾಡುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸಪ್ನಾ ಎನ್. ಶೆಟ್ಟಿ, ಪ್ರಾಂಶುಪಾಲ ಪ್ರಶಾಂತ ಎಚ್., ಸಾಂಸ್ಕೃತಿಕ ಸಮಿತಿಯ ಸಂಯೋಜಕಿ ಪ್ರೀತಿ ಪಿ. ಹೆಗಡೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಪರೀಕ್ಷಿತ್ ಆಚಾರ್ಯ ಹಾಗೂ ಶ್ಯಾಮಿಲಿ ಉಪಸ್ಥಿತರಿದ್ದರು.
ಯುಕ್ತ ಸ್ವಾಗತಿಸಿದರು. ಅಭಿನವ್ ಐತಾಳ್ ವಂದಿಸಿದರು. ಭೂಮಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.
