ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನ ಗುಂಡ್ಯಡ್ಕದಲ್ಲಿ ಜ. 04ರಿಂದ ಜ. 11ರವರೆಗೆ ಭಜನಾ ಮಂಡಳಿಯ ವಜ್ರಮಹೋತ್ಸವ ಪ್ರಯುಕ್ತ ಅಖಂಡ ಭಜನಾ ಸಪ್ತಾಹ ನಡೆಯಲಿರುವುದಾಗಿ ಭಜನಾ ಮಂಡಳಿಯ ಅಧ್ಯಕ್ಷ ಪಾಂಡುರಂಗ ಭಟ್ ಮತ್ತು ಹಿರಿಯ ಪೋಷಕರಾದ ಕೆ.ಆರ್. ಪಂಡಿತ್ ತಿಳಿಸಿದ್ದಾರೆ.

ಜ. 04ರಂದು ಗಣಪತಿ ಹವನ, ಗುರುದೇವತಾ ಪ್ರಾರ್ಥನೆ ನಂತರ ಮಂಗಳೂರು ಶ್ರೀರಾಧಕೃಷ್ಣ ದೇವಸ್ಥಾನದ ವೇ|ಮೂ| ಎಂ. ಕೇಶವ ಭಟ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಜ. 11ರಂದು ಪೂರ್ವಾಹ್ನ 7.00ಗಂಟೆಗೆ ಭಜನಾ ಮಂಗಳ ನಡೆಯಲಿದೆ.

ಡಿ.28ರಂದು ಈ ಅಪೂರ್ವ ಮಹೋತ್ಸವದ ಅಂಗವಾಗಿ ಅಪರಾಹ್ನ ಗಂಟೆ3.30ರಿಂದ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ವಿಶೇಷ ನಗರ ಭಜನೆ ನಡೆಯಲಿದೆ. 7 ಮಂದಿ ಸ್ಥಾಪಕ ಸದಸ್ಯರ ಮನೆಗಳಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ಈ ಭಜನಾ ಸಪ್ತಾಹದಲ್ಲಿ ಸುಮಾರು 100 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಭಜನಾ ಕಾರ್ಯಕ್ರಮಗಳಿಗೆ ಮತ್ತು ದೇವಸ್ಥಾನದ ಚಟುವಟಿಕೆಗಳಿಗೆ ಹಿಂದು ಮನೆಗಳವರು ಮಾತ್ರವಲ್ಲದೆ ಆಸುಪಾಸಿನ ಕ್ರೈಸ್ತ ಮನೆಗಳವರು ಕೂಡ ಸಂಪೂರ್ಣ ಸಹಕಾರ ನೀಡುತ್ತಿರುವುದನ್ನು ಮಂಡಳಿಯ ಪ್ರಮುಖರು ಉಲ್ಲೇಖಿಸಿದರು.
ಪ್ರಾರಂಭದಲ್ಲಿ ಈ ಭಾಗದಲ್ಲಿ ವಾಸ್ತವ್ಯ ಹೊಂದಿದ್ದ ಮುಸ್ಲಿಂ ಹಾಗೂ ಕ್ರೈಸ್ತ ಬಂಧುಗಳು ಭಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಗೋಷ್ಠಿಯಲ್ಲಿ ಸ್ಮರಿಸಿದರು.
ಕಾರ್ಯದರ್ಶಿ ರಮೇಶ್ ಭಟ್ ಪರಾಡ್ಕರ್, ಪ್ರಮುಖರಾದ ರಾಘವ ಮೋಘೆ, ಪ್ರಭಾಕರ ಪರಾಡ್ಕರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
