ಕಾರ್ಕಳ ಬೈಲೂರು ಕಣಜಾರು ಪಳ್ಳಿ ಮಾರ್ಗದಲ್ಲಿ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯಡಿ ಸಂಚರಿಸುತ್ತಿದ್ದ ಸರಕಾರಿ ಬಸ್ಸು ಇದೀಗ ಏಕಾಏಕಿ ಸ್ಥಗಿತಗೊಂಡಿದ್ದು ಕೂಡಲೇ ಪುನರಾರಂಭಿಸುವಂತೆ ಪಳ್ಳಿ ನಿಂಜೂರು ಗ್ರಾಮಸ್ಥರು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಮಾರ್ಗದ ಮೂಲಕ ಚಲಿಸುತ್ತಿದ್ದ ಬಸ್ಸಿನಿಂದ ಶಾಲಾ ಮಕ್ಕಳು ನಾಗರೀಕರಿಗೆ ಹಾಗೂ ದಿನಂಪ್ರತಿ ತೆರಳುವ ಕೂಲಿ ಕಾರ್ಮಿಕರಿಗೆ ಪ್ರಯೋಜನವಾಗುತ್ತಿತ್ತು. ಇದನ್ನೇ ನಂಬಿಕೊಂಡು ಹೋಗುತ್ತಿದ್ದ ಪ್ರಯಾಣಿಕರಿಗೆ ಏಕಾಏಕಿ ಬಸ್ಸು ಸಂಚಾರ ಸ್ಥಗಿತ ಗೊಂಡಿರುವುದರಿಂದ ಪ್ರಯಾಣಿಕರು ಕಷ್ಟ ಪಡುವಂತಾಗಿದೆ. ಖಾಸಗಿ ಬಸ್ಸಿನಲ್ಲಿ ಜನರು ನೇತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಥಗಿತಗೊಂಡಿದ್ದ ಬಸ್ ಸಂಚಾರವನ್ನು ಕೂಡಲೇ ಸಂಬಂಧಪಟ್ಟ ಇಲಾಖೆಗೆ ಮನವರಕೆ ಮಾಡಿ ಬಸ್ಸನ್ನು ಪುನರಾರಂಭಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರಘುನಾಥ ಶೆಟ್ಟಿ ಪಳ್ಳಿ, ವಿಶ್ವನಾಥ ಭಂಡಾರಿ ನಿಂಜೂರು, ಫಿಲೋಮಿನಾ ಮೆಂಡೊನ್ಸಾ, ಸಂತೋಷ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಂಜೂರು, ವಿಲ್ಸನ್ ಲೋಬೋ, ಪಳ್ಳಿ ಹಾಗೂ ನಿಂಜೂರು ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತಿ ಶೀಘ್ರದಲ್ಲಿ ಬಸ್ಸು ಪುನರಾರಂಭಿಸುವಂತೆ ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆಯು ನಡೆಯಿತು.
