ಮುದ್ರಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದಾನಿಗಳಿಂದ ಕೊಡಮಾಡಲ್ಪಟ್ಟ ಕಂಪ್ಯೂಟರ್ ಮತ್ತು ಪ್ರಿಂಟರ್ ಹಸ್ತಾಂತರ ಕಾರ್ಯಕ್ರಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಸಂತಿ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಫೆ.12 ರಂದು ನಡೆಯಿತು.

ದಾನಿಗಳಾದ ರೂಪೇಶ್ ಶೆಟ್ಟಿ, ವಾಸುದೇವ ಹೆಬ್ಬಾರ್ ಪರವಾಗಿ ಸಾಗರ ಹೆಬ್ಬಾರ್, ದನಂಜಯ ಹೆಗ್ಡೆ ಪರವಾಗಿ ರಕ್ಷಣ್ ಹೆಗ್ಡೆರವರು ಭಾಗವಹಿಸಿ ಗ್ರಾಮ ಪಂಚಾಯತ್ ಗ್ರಾಮ ಆಡಳಿತಾಧಿಕಾರಿಯವರ ಕಚೇರಿಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ಹಸ್ತಾಂತರಿಸಿದರು.
ರೂಪೇಶ್ ಶೆಟ್ಟಿ ಮಾತನಾಡಿ ಮುಂದಿನ ದಿನಗಳಲ್ಲಿಯೂ ಪಂಚಾಯತ್ನ ಅಭಿವೃಧ್ಧಿಗೆ ನಮ್ಮಗಳ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಗ್ರಾಮ ಪಂಚಾಯತ್ ಹಿರಿಯ ಸದಸ್ಯರಾದ ಗಣಪತಿ ಎಂ ಮಾತನಾಡಿ ಸ್ಥಳಿಯ ಸಂಸ್ಥೆ ಪಂಚಾಯತ್ನೊಂದಿಗೆ ಸಾರ್ವಜನಿಕರು ಕೈ ಜೋಡಿಸಿದಾಗ ಗ್ರಾಮಗಳ ಅಭಿವೃದ್ದಿಗೆ ಮತ್ತಷ್ಟು ಬಲ ಸಿಗುವುದಾಗಿ ತಿಳಿಸಿದರು.
ಸ್ಥಳೀಯರಾದ ಕಾಪೋಳಿ ಶ್ರೀಧರ ಹೆಬ್ಬಾರ್ ಹಾಗೂ ಸಂತೋಷಕುಮಾರ್ ಶೆಟ್ಟಿ ಮಾತನಾಡಿ ಈ ಕಾರ್ಯಕ್ರಮವು ಮತ್ತಷ್ಟು ದಾನಿಗಳಿಗೆ ಪ್ರೇರಣೆ ನೀಡುವಂತಾಗಲಿ, ಇನ್ನೂ ಹೆಚ್ಚಿನ ರೀತಿಯಲ್ಲಿ ದಾನಿಗಳಿಂದ ಗ್ರಾಮ ಪಂಚಾಯತಿಗೆ ಸಹಕಾರ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ಕಾಯರ್ಕ್ರಮದಲ್ಲಿ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃಧ್ಧಿ ಅಧಿಕಾರಿ, ಕಾರ್ಯದರ್ಶಿ, ಪಂಚಾಯತ್ ಸಿಬ್ಬಂದಿ ವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂಚಾಯತ್ ಗುಮಾಸ್ತರಾದ ಪದ್ಮನಾಭ ಆರ್ ಕುಲಾಲ್ ನಿರೂಪಿಸಿ ಸ್ವಾಗತಿಸಿದರು, ಗ್ರಾಮ ಆಡಳಿತಾಧಿಕಾರಿ ಗಿರೀಶ್ ರೈ ದನ್ಯವಾದ ಸಮರ್ಪಿಸಿದರು.
