ಅನಧಿಕೃತ ವಿಷಕಾರಿ ಕೈಗಾರಿಕಾ ಉದ್ಯಮ ಕಾಮಗಾರಿ ನಿಲ್ಲಿಸದೆ ಇದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ “ಪಳ್ಳಿ ಗ್ರಾಮಸ್ಥರು”
ಪಳ್ಳಿ ಗ್ರಾಮದ ಕೊಡಿಮಲೆ ಪರಿಸರದಲ್ಲಿ ಒಬ್ಬರ ಖಾಸಗಿ ಜಾಗದಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೊ ಕಾಮಗಾರಿ ನಡೆಯುತ್ತಿದ್ದು ಯಾವುದೊ ದೊಡ್ಡಮಟ್ಟದ ಕೈಗಾರಿಕಾ ಉದ್ಯಮ ನಡೆಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದು ಸ್ಥಳೀಯ ಪಂಚಾಯತ್ ಗೆ ಸ್ಥಳೀಯರು ಮನವಿ ನೀಡಿದ್ದು ಪಂಚಾಯತ್ ಅಧಿಕಾರಿಗಳಿಗೂ ಇದರ ಬಗ್ಗೆ ಯಾವುದೇ ಅರ್ಜಿಗಳು ಅಥವಾ ಯಾವುದೇ ದಾಖಲೆಗಳಿಲ್ಲದೆ ಅನಧಿಕ್ರತ ಕಟ್ಟಡ ಕೂಡ ನಿರ್ಮಾಣ ಆಗಿರುವುದು ಕಂಡು ಬಂದಿರುತ್ತದೆ.
ಪಂಚಾಯತ್ ಅಧಿಕಾರಿಗಳು ಸ್ಥಳ ಪರಿಶೀಲಿಸಿರುತ್ತಾರೆ. ಆದರೆ ಅಲ್ಲಿ ಹಗಲು ರಾತ್ರಿ ಕಾಮಗಾರಿ ಮಾಡುತ್ತಿದ್ದು ಮತ್ತೆ ಆತಂಕ ಗೊಂಡ ಸ್ಥಳೀಯ ಗ್ರಾಮಸ್ಥರು ಕಾರ್ಕಳ ತಾಲೂಕು ತಹಶೀಲ್ದಾರ್, ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ, ಹಾಗೂ ಕಾರ್ಕಳ ನಗರ ಆರಕ್ಷಕ ಠಾಣೆಗೆ ಮನವಿಯನ್ನು ನೀಡಿರುತ್ತಾರೆ. ಆದರೂ ಕೂಡ ಕಾಮಗಾರಿ ಸ್ಥಗಿತಗೊಳಿಸದೇ ಮುಂದುವರೆಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿರುತ್ತದೆ.
ಇಂದು ದಿನಾಂಕ -23-02-2026 ಸೋಮವಾರ ಪಳ್ಳಿ ಕೊಡಿಮಲೆ, ಬೊಬ್ಬರ್ಯ ಪಲ್ಕೆ ಪರಿಸರ ಹಾಗೂ ಕೌಡೂರು ಗ್ರಾಮಕ್ಕೂ ಇದರ ಸಮಸ್ಯೆ ಇದ್ದು ಇಲ್ಲಿನ ಅನ್ಯಾರ್ ಕಟ್ಟೆ ಗ್ರಾಮಸ್ಥರು ಸೇರಿ ಸುಮಾರು ನೂರಕ್ಕೂ ಅಧಿಕ ಜನರು ಬೆಳಗ್ಗೆ ಪಳ್ಳಿ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ಪ್ರಾರಂಭಿಸಿರುತ್ತಾರೆ. ಶೀಘ್ರವೇ ಈ ಅನಧಿಕ್ರತ ಕಟ್ಟಡ ಹಾಗೂ ಕಾಮಗಾರಿ ಸ್ಥಗಿತಗೊಳಿಸುವಂತೆ ಘೋಷನೆಗಳನ್ನು ಹಾಕಿದರು.
ಸ್ಥಳೀಯ ಪಂಚಾಯತ್ ಅಧಿಕಾರಿಗಳು ಸಂಬಂಧ ಪಟ್ಟವರಿಗೆ ನೋಟಿಸ್ ಜಾರಿ ಮಾಡಿರುವ ಬಗ್ಗೆ ಮಾಹಿತಿ ನೀಡಿದರು. ಆದರೆ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡದೆ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು ಈಗಲೇ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಕೊನೆಗೆ ಕಾರ್ಕಳ ತಹಶೀಲ್ದಾರ್ ಅವರು ತುರ್ತಾಗಿ ಪ್ರತಿಭಟನಾಕಾರರ ಬಳಿ ಬಂದಿರುತ್ತಾರೆ, ಈ ವೇಳೆ ಇನ್ನೊಂದು ಮನವಿಯನ್ನು ನೀಡಲಾಗಿ ಈಗಾಗಲೇ ತಮ್ಮ ಗಮನಕ್ಕೆ ತಂದಿರುವ ವಿಚಾರದಲ್ಲಿ ಯಾವುದೇ ಕ್ರಮ ವಹಿಸಿರುವುದಿಲ್ಲ ಆದುದರಿಂದ ತಕ್ಷಣ ತಾವು ಸ್ಥಳಕ್ಕೆ ಭೇಟಿ ನೀಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಲಾಯಿತು. ಇಲ್ಲವಾದಲ್ಲಿ ದಿನಾಂಕ 26-02-2026 ಗುರುವಾರ ಕೈಗಾರಿಕೆ ನಡೆಯುವ ಪ್ರದೇಶದಲ್ಲಿ ಉಗ್ರ ಹೋರಾಟ ಮಾಡವವರಿದ್ದೇವೆ ಇಲ್ಲಿ ಏನಾದರು ಅನಾಹುತ ಆದಲ್ಲಿ ಸರಕಾರದ ಇಲಾಖೆಗಳೇ ನೇರ ಹೊಣೆಯಾಗಿರುತ್ತದೆ ಎಂದು ತಿಳಿಸಲಾಯಿತು.
ಮನವಿಯನ್ನು ಸ್ವೀಕರಿಸಿ ನಂತರ ಕೊಡಿಮಲೆ ಪ್ರದೇಶಕ್ಕೆ ತಹಶಿಲ್ದಾರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿ ನಡೆಯುವ ಸ್ಥಳವನ್ನು ವೀಕ್ಷಿಸಿ. ಅಲ್ಲಿ ಕಾಮಗಾರಿ ಸ್ಥಗಿತಗೊಳಿಸುವಂತೆ ತಿಳಿಸಿದರು. ಯಾವುದೇ ಪರವಾನಗಿ ಇಲ್ಲದೆ ಕೆಲಸ ಮಾಡುವಂತಿಲ್ಲ, ಮುಂದುವರೆಸಿದರೆ ಕೇಸ್ ಹಾಕುತ್ತೇವೆ, ಮೊದಲು ಪರವಾನಗಿ ಮಾಡಿಸಿಕೊಂಡು ಬನ್ನಿ ಸ್ಥಳೀಯ ಜನರಿಗೆ ಆತಂಕ ಹುಟ್ಟಿಸಬೇಡಿ ಎಂದು ತಿಳಿಸಿದರು.
ಹಾಗೂ ಪಂಚಾಯತ್ ನಿಂದ ನೋಟಿಸ್ ನೀಡುವಂತೆ ತಿಳಿಸಿದರು. ಪಳ್ಳಿ ಗ್ರಾಮದಲ್ಲಿ ಇಂತಹ ಒಂದು ದೊಡ್ಡ ಕೈಗಾರಿಕೆ ಪ್ರಾರಂಭವಾದಲ್ಲಿ ಅದರ ಕಲುಷಿತ ನೀರು ಈ ಭಾಗದ ಕೃಷಿಯನ್ನೇ ಅವಲಂಭಿಸಿರುವ ಜನರಿಗೆ ಬಹಳ ಮಾರಕವಾಗಲಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. ಇದರ ಮಾಲೀಕರು ಯಾರು ಯಾವ ಉದ್ದೇಶಕ್ಕೆ ಮಾಡುತಿದ್ದಾರೆ ಎಂಬುದೇ ತಿಳಿಯದೆ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಇದು ಮುಂದುವರೆದಲ್ಲಿ ಹೋರಾಟ ಇನ್ನು ತೀವ್ರಗೊಳ್ಳುವ ಸಾಧ್ಯತೆ ಇದೇ ಸುಮಾರು 300 ಮನೆಗಳಿಗೆ ಇದರ ತೊಂದರೆ ಆಗುವ ಸಾಧ್ಯತೆಗಳಿದ್ದು ಎಲ್ಲರೂ ಬೀದಿಗಿಳಿದು ಹೊರಡುವ ದಿನಗಳು ದೂರವಿಲ್ಲ ಎಂದು ಸ್ಥಳೀಯರ ಅಭಿಪ್ರಾಯ.

