ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿ 29 ಶಾಖೆಗಳು ಹಾಗೂ 2 ವಿಸ್ತರಣಾ ಕೌಂಟರ್ಗಳೊಂದಿಗೆ, ವಿಸ್ತೃತ ಸೇವಾ ಜಾಲವನ್ನು ಹೊಂದಿ ಕಳೆದ 32 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲಿ ಒಂದಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. 2025-26ನೇ ಸಾಲಿನಲ್ಲಿ ಒಟ್ಟು ವ್ಯವಹಾರದಲ್ಲಿ ಸಾರ್ವಕಾಲಿಕ ದಾಖಲೆಯ ವೃದ್ಧಿಯನ್ನು ಹೊಂದಿ 31.03.2026ಕ್ಕೆ ಠೇವಣಾತಿ ರೂ.695 ಕೋಟಿ ಹಾಗೂ ಸಾಲ ರೂ.610 ಕೋಟಿಯೊಂದಿಗೆ ಒಟ್ಟು ವ್ಯವಹಾರ ರೂ.1305 ಕೋಟಿಯನ್ನು ತಲುಪಿ, ರೂ.5901ಕೋಟಿ ಒಟ್ಟು ವಹಿವಾಟು ದಾಖಲಿಸಿ ತನ್ನ ಎಲ್ಲಾ ಕಾರ್ಯವಿಭಾಗಗಳಲ್ಲಿ ನಿಗದಿತ ಗುರಿಯನ್ನು ಮೀರಿ ಅಮೋಘ ಸಾಧನೆಯನ್ನು ಮಾಡಿದೆ.
ಹಿಂದಿನ ಸಾಲಿಗೆ ಹೋಲಿಸಿದಾಗ ಪ್ರಸ್ತುತ ಸಾಲಿನಲ್ಲಿ ಠೇವಣಾತಿಯಲ್ಲಿ ರೂ.106 ಕೋಟಿ ಹೆಚ್ಚಳ ಶೇ.18 ವೃದ್ಧಿ ಹಾಗೂ ಸಾಲದಲ್ಲಿ ರೂ.105 ಕೋಟಿ ಹೆಚ್ಚಳ, ಶೇ.21 ವೃದ್ಧಿ, ಒಟ್ಟು ವ್ಯವಹಾರದಲ್ಲಿ ರೂ.211ಕೋಟಿಯಾಗಿ ಸಾರ್ವಕಾಲಿಕ ದಾಖಲೆಯ ಹೆಚ್ಚಳದೊಂದಿಗೆ ಶೇ.19 ವಾರ್ಷಿಕ ವೃದ್ಧಿಯೊಂದಿಗೆ ಒಟ್ಟು ವ್ಯವಹಾರವು ರೂ.1305 ಕೋಟಿ ತಲುಪಿದ್ದು ಸಂಘದ ವಿಷನ್ 2030ರ ರೂ.2000 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಸಾಧಿಸುವತ್ತ ದೃಢ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿದೆ.
31.03.2026ಕ್ಕೆ ಸಂಘವು ರೂ.19.35 ಕೋಟಿಯನ್ನು ಮೀರಿದ ನಿವ್ವಳ ಲಾಭವನ್ನು ಗಳಿಸಿದ್ದು ಇದು ಕಳೆದ ಸಾಲಿಗಿಂತ ರೂ.3 ಕೋಟಿಯಷ್ಟು ಹೆಚ್ಚಳದೊಂದಿಗೆ ಶೇ.19 ವೃದ್ಧಿಯಾಗಿದೆ. ಸಂಘವು ಕಳೆದ 7 ವರ್ಷಗಳಿಂದ ಸತತವಾಗಿ ಶೇ.25 ಡಿವಿಡೆ೦ಡ್ನ್ನು ಸದಸ್ಯರಿಗೆ ನೀಡುತ್ತಾ ಬಂದಿದೆ. 2030ಕ್ಕೆ ರೂ.25 ಕೋಟಿ ನಿವ್ವಳ ಲಾಭ ಗಳಿಸುವ ಗುರಿಯನ್ನು ಹೊಂದಿದೆ.
ಸಂಘದಲ್ಲಿ 31.03.2026ಕ್ಕೆ ರೂ.22 ಲಕ್ಷದಷ್ಟು ಮಾತ್ರ ಅನುತ್ಪಾದಕ ಆಸ್ತಿ ಇದ್ದು, ಇದು ಹೊರಬಾಕಿ ಸಾಲದ ಶೇ.0.04ಕ್ಕೆ ಸೀಮಿತವಾಗಿರುವುದಲ್ಲದೆ ಸಂಘವು ಕೆಟ್ಟ ಮತ್ತು ಅನುತ್ಪಾದಕ ಸಾಲಕ್ಕೆ ಈಗಾಗಲೇ ರೂ.5 ಕೋಟಿಯಷ್ಟು ನಿಧಿಯನ್ನು ಅನುವು ಮಾಡಿಕೊಂಡಿದ್ದು ಸಂಘದ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 19 ವರ್ಷದಿಂದ ಶೂನ್ಯ ಪ್ರಮಾಣದಲ್ಲಿರುವುದು.
2025-26ನೇ ಸಾಲಿನಲ್ಲಿ ಸಂಘವು 4 ಹೊಸ ಶಾಖೆಗಳು ಮತ್ತು 2 ವಿಸ್ತರಣಾ ಕೌಂಟರ್ಗಳನ್ನು ಆರಂಭಿಸಿ ತನ್ನ ಶಾಖಾ ಸೇವಾ ಜಾಲವನ್ನು 31 ಕೇಂದ್ರಗಳಿಗೆ ವಿಸ್ತರಿಸಿದೆ ಹಾಗೂ ಮುಂದಿನ ಸಾಲುಗಳಲ್ಲಿ ಪ್ರತಿ ವರ್ಷ 2 ಹೊಸ ಶಾಖೆಗಳೊಂದಿಗೆ 2030ಕ್ಕೆ ಒಟ್ಟು 40 ಶಾಖೆಯನ್ನು ಹೊಂದುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಸಂಘದ ಕೇಂದ್ರ ಕಛೇರಿಗೆ 37000 ಚ.ಅ. ಸುಸಜ್ಜಿತ ಆಧುನಿಕ ಸೌಕರ್ಯವುಳ್ಳ ಸುಸಜ್ಜಿತ ಕಟ್ಟಡದ ಕಾಮಗಾರಿಯು ಕೊನೆಯ ಹಂತದಲ್ಲಿದ್ದು ಅದನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ.
2024ನೇ ಸಾಲಿನಲ್ಲಿ ಮೊದಲ ಬಾರಿಗೆ ಅನುಷ್ಟಾನಿಸಲಾದ ಅವಿಭಜಿತ ದ.ಕ ಜಿಲ್ಲೆಯಲ್ಲಿ ಸರ್ವಾಂಗೀಣ ಪ್ರಗತಿ ಸಾಧಿಸಿದ ಅತ್ಯುತ್ತಮ ಕ್ರೆಡಿಟ್ ಸಹಕಾರ ಸಂಘಕ್ಕೆ ನೀಡಲಾಗುವ “ಸಹಕಾರ ಮಾಣಿಕ್ಯ” ಪ್ರಶಸ್ತಿ ಹಾಗೂ ರೂ.1000 ಕೋಟಿ ಒಟ್ಟು ವ್ಯವಹಾರವನ್ನು ದಾಖಲಿಸಿದ ಸಾಧನೆಗಾಗಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ನ ಮಹಾಸಭೆಯಲ್ಲಿ ‘ವಿಶೇಷ ಗೌರವ’ ಪ್ರಶಸ್ತಿ ಸೇರಿದಂತೆ ಸಹಕಾರ ಇಲಾಖೆಯಿಂದ ಒಟ್ಟು 7 ಬಾರಿ ರಾಜ್ಯ ಮಟ್ಟದ ಹಾಗೂ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ನಿಂದ ಒಟ್ಟು 14 ಬಾರಿ ಜಿಲ್ಲಾ ಮಟ್ಟದ ಅತ್ಯುತ್ತಮ ಕ್ರೆಡಿಟ್ ಕೋ-ಓಪರೇಟಿವ್ ಸಂಘ ಪ್ರಶಸ್ತಿ ದೊರೆತಿದೆ.
ಸಂಘವು ತನ್ನ ಕಾರ್ಯವ್ಯಾಪ್ತಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ 1 ಲಕ್ಷಕ್ಕೂ ಅಧಿಕ ಸಂತೃಪ್ತ ಠೇವಣಿದಾರ, ಸಾಲಗಾರ ಸದಸ್ಯರುಗಳ ಸಹಕಾರ, ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕತೆ, ಕಾರ್ಯದಕ್ಷತೆಯಿಂದ ತನ್ನ ಎಲ್ಲಾ ಕಾರ್ಯಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿದೆ ಎಂದು ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
