ಕಾರ್ಕಳ: ಕುಕ್ಕುಂದೂರು ಗ್ರಾಮದ ಶಂಕರಬೆಟ್ಟು ಅರ್ಬಿಪಾದೆ ಎಂಬಲ್ಲಿರುವ ಸರ್ವೇ ನಂಬ್ರ 281 ರಲ್ಲಿರುವ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಸುತ್ತಿರುವವರ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮುರಳೀಧರ ನಾಯ್ಕ್ ದಾಳಿ ನಡೆಸಿ 2 ಲಾರಿ ವಶಪಡಿಸಿಕೊಂಡು ಏ. 15ರಂದು ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ.




ಸರಕಾರಿ ಸ್ಥಳದಲ್ಲಿರುವ ಕಲ್ಲು ಕೋರೆ ಪ್ರದೇಶಕ್ಕೆ ದಾಳಿ ನಡೆಸಿ ಸದ್ರಿ ಸ್ಥಳವನ್ನು ಪರಿಶೀಲಿಸಿದಾಗ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ಸದ್ರಿ ಪ್ರದೇಶದಲ್ಲಿ KA 19 B 7745 ನೇ ನಂಬ್ರದ ಟಿಪ್ಪರ್ ಲಾರಿ ಚಾಲಕ ಮತ್ತು KA 40 1801 ನೇ ಲಾರಿ ಚಾಲಕ ಸೇರಿಕೊಂಡು ಸಂಘಟಿತರಾಗಿ ಕಲ್ಲುಗಳನ್ನು ಕಳವು ಮಾಡಿ ಸಾಗಾಟ ಮಾಡಲು ಲೋಡ್ ಮಾಡುತ್ತಿದ್ದರು.




ಈ ಸಂದರ್ಭ ಚಾಲಕರನ್ನು ವಶಕ್ಕೆ ಪಡೆದು ಕಲ್ಲು ತೆಗೆಯಲು ಉಪಯೋಗಿಸಿದ 2 ಚಮ್ಮಡಿ, 1 ಕಬ್ಬಿಣದ ಹಾರೆ, 2 ಕಬ್ಬಿಣದ ಚಾಣ, 1 ಕಬ್ಬಿಣದ ಸರಳು ಮತ್ತು ಸೈಜ್ ಕಲ್ಲುಗಳನ್ನು ಲೋಡ್ ಮಾಡಿದ KA 19 B 7745 ನಂಬ್ರದ ಟಾಟಾ ಕಂಪೆನಿಯ ಟಿಪ್ಪರ್ ಮತ್ತು KA 40 1801 ನಂಬ್ರದ ಖಾಲಿ ಲಾರಿಯನ್ನು ವಶಕ್ಕೆ ಪಡೆದುಕೊಂಡು ಬಂದು ಆರೋಪಿತರಾದ ಮನೋಜ್ ಮತ್ತು ಶರಣ್ ಎಂಬವರ ವಿರುದ್ಧ ಕಾನೂನು ಕ್ರಮದ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
