ಮೂಡುಬಿದಿರೆ : ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ ಒಂದು ವಾರಗಳ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವ ಸ್ಪಂದನ ಯೋಜನೆಯ ಅಧ್ಯಕ್ಷ ನವಾನಂದ ಮೂಡುಬಿದಿರೆ ಅವರು ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನಡೆಸುವ ಈ ಶಿಬಿರವು ಸಮಾಜಕ್ಕೆ ಮಾದರಿಯಾಗಿದ್ದು, ಇಂತಹ ಅವಕಾಶಗಳು ಇನ್ನಷ್ಟು ವಿದ್ಯಾರ್ಥಿಗಳಿಗೆ ಲಭಿಸಬೇಕು ಎಂದು ಆಶಿಸಿದರು. ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಯುವವಾಹಿನಿಯ ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸಿದರು.
ಮಂಗಳೂರು ಕೆನರಾ ಬ್ಯಾಂಕ್ ಎಫ್ಎಲ್ಸಿ ಪ್ರತಿನಿಧಿ ಲತೇಶ್ ಅವರು ಮಕ್ಕಳಿಗೆ ಹಣಕಾಸು ಸಾಕ್ಷರತೆ ಹಾಗೂ ಸರ್ಕಾರದ ಮಕ್ಕಳ ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ, ಯುವವಾಹಿನಿ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಸಹಭಾಗಿತ್ವದ ಕಾರ್ಯಕ್ರಮಗಳನ್ನು ನಡೆಸುವ ಆಶಯ ವ್ಯಕ್ತಪಡಿಸಿದರು.
ಯುವವಾಹಿನಿ ( ರಿ. ) ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಅವರು ಮಾತನಾಡಿ, ಈ ಶಿಬಿರವು ತಮ್ಮ ಕನಸಿನ ಸಾಕಾರವಾಗಿದ್ದು, ಎಲ್ಲಾ ಸಮಾಜದ ಮಕ್ಕಳಿಗೂ ಇಂತಹ ಅವಕಾಶಗಳು ಸಿಗುವಂತಾಗಿರುವುದು ಸಂತಸದ ವಿಷಯ ಎಂದರು. ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಶುಭಲಕ್ಷ್ಮಿ ಅವರ ನಿರ್ದೇಶನವನ್ನು ಮೆಚ್ಚಿ, ಅವರಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಅಭಿನಂದಿಸಿದರು. ಜೊತೆಗೆ, ವಿದ್ಯಾರ್ಥಿಗಳಿಗೆ ಯುವವಾಹಿನಿಯಿಂದ ಅಗತ್ಯವಾದ ಸಹಾಯವನ್ನು ನೀಡಲು ಸದಾ ಸಿದ್ಧವಾಗಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ( ರಿ. ) ಮೂಡುಬಿದಿರೆ ಘಟಕದ ಪದಾಧಿಕಾರಿಗಳಾದ ಜಯಶೀಲಾ ಎಸ್ ಪೂಜಾರಿ, ಭಾಗ್ಯಶ್ರೀ ಅಂಚನ್, ಸುಮಿತ್ರ ವಿಶ್ವನಾಥ್, ಯೋಗಿತಾ ನವಾನಂದ ಹಾಗೂ ರತ್ನಾವತಿ ಉಪಸ್ಥಿತರಿದ್ದರು. ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಶುಭ ಲಕ್ಷ್ಮಿ ಅವರು ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ನಿರೂಪಿಸಿದರು.
