ಕಾರ್ಕಳ: ಸೂರಾಲು ಗುಂಡಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿವಿಧ ಸವಲತ್ತುಗಳ ವಿತರಣಾ ಸಮಾರಂಭ ಜೂ. 17 ರಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉಮೇಶ್ ಕುಲಾಲ್ ಸೂರಾಲು ಅವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಉದ್ಯಮಿ ವಿಜೇಂದ್ರ ಪ್ರಭು ಕಾರ್ಕಳ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ತಮ್ಮನ್ನು ಹೆತ್ತು, ಹೊತ್ತು, ಸಾಕಿ ಸಲಹಿದ ತಂದೆ ತಾಯಿ ಮತ್ತು ವಿದ್ಯೆ ಕಲಿಸಿದ ಗುರುವನ್ನು ಸದಾ ಕಾಲ ಗೌರವಿಸುವ ಜೊತೆಗೆ ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಿ ಮೂಡಿ ಬರುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ದಾನಿಗಳು ಉಚಿತವಾಗಿ ನೀಡಿದ ಸುಮಾರು ರೂಪಾಯಿ 58000/- ಮೌಲ್ಯದ ನೋಟ್ ಪುಸ್ತಕ ಬರವಣಿಗೆ ಸಾಮಗ್ರಿ, ಬ್ಯಾಗ್, ಕೊಡೆ, ಸಮವಸ್ತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಯಿತು.
ಮುಖ್ಯ ಅತಿಥಿ ಮಂಗಳೂರು ಎಂಸಿಸಿ ಬ್ಯಾಂಕ್ ಉಪಾಧ್ಯಕ್ಷರು ಹಾಗೂ ಉದ್ಯಮಿ ಜೆರಾಲ್ಡ್ ಡಿಸಿಲ್ವ ಮಿಯ್ಯಾರು ಅವರು ಮಾತನಾಡಿ ಸರಕಾರಿ ಶಾಲೆಯಲ್ಲಿ ಕಲಿಯುವ ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ನಮ್ಮಿಂದಾದ ಸಹಕಾರವನ್ನು ನೀಡುತ್ತಿದ್ದು, ಉಚಿತ ಸವಲತ್ತುಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು, ತಂದೆ ತಾಯಿಗೆ ಆದರ್ಶ ಮಕ್ಕಳಾಗಿ, ಸಮಾಜವನ್ನು ಮುನ್ನಡೆಸುವ ಉತ್ತಮ ನಾಯಕರಾಗಿ ಮೂಡಿ ಬರುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಕಳ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯರು ಹಾಗೂ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ತಾರಾನಾಥ ಕೋಟ್ಯಾನ್ ಸೂರಾಲು ಅವರು ದಾನಿಗಳ ಕೊಡುಗೆಯಿಂದಾಗಿ ಗ್ರಾಮೀಣ ಪ್ರದೇಶದ ಸರಕಾರಿ ಶಾಲಾ ಮಕ್ಕಳು ಕೂಡ ಮೌಲ್ಯಯುತ ಶಿಕ್ಷಣ ಪಡೆಯಲು ಸಾದ್ಯವಾಗುತ್ತಿದ್ದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡುವ ಸಹಕಾರವು ದೇವಾಲಯಕ್ಕೆ ನೀಡುವ ಕೊಡುಗೆಯಿಂದಲೂ ಮೇಲ್ಪಂಕ್ತಿಯದ್ದು ಎಂದು ಹೇಳಿದ ಅವರು ದಾನಿಗಳ ನಿಸ್ವಾರ್ಥ ಕೊಡುಗೆಯನ್ನು ಪ್ರಶಂಸಿಸಿದರು.
ಕಾರ್ಕಳ ಆಟೋರಿಕ್ಷಾ ಚಾಲಕ ಮಾಲಕ ಸಂಘದ ಸಂಘಟನಾ ಕಾರ್ಯದರ್ಶಿ ಸಂತೋಷ್ ರಾವ್ ಮಾತನಾಡಿ ಇಂದು ತಮ್ಮ ಶಿಕ್ಷಣ ಅಭ್ಯಾಸಕ್ಕಾಗಿ ದಾನಿಗಳ ಕೊಡುಗೆಯನ್ನು ಪಡೆದುಕೊಂಡ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿಸಿ ಉದ್ಯೋಗಸ್ಥರಾದ ನಂತರ ತಾವು ಕಲಿತ ಶಾಲೆಗೆ ತಮ್ಮ ದುಡಿಮೆಯ ಒಂದು ಪಾಲನ್ನು ನೀಡುವ ಮೂಲಕ ಋಣ ಸಂದಾಯ ಮಾಡುವ ಕೆಲಸ ಮಾಡಬೇಕಾಗಿದೆ ಎಂದರು.
ವೇದಿಕೆಯಲ್ಲಿ ಸೂರಾಲು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸುಧಾಕರ.ಎಂ.ಶೆಟ್ಟಿ, ಉಪಾಧ್ಯಕ್ಷೆ ಮೀರಾ ಜಯಪ್ರಕಾಶ್, ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಸಹ ಸಂಘಟನಾ ಕಾರ್ಯದರ್ಶಿ ಶಿವಾನಂದ ಪೂಜಾರಿ, ಹಿರಿಯರಾದ ರಮೇಶ್ ದೇವಾಡಿಗ ಉಪಸ್ಥಿತರಿದ್ದರು.
ಉದ್ಯಮಿ ಜೆರಾಲ್ಡ್ ಡಿಸಿಲ್ವ ಮಿಯ್ಯಾರು ನೀಡಿದ ಬರವಣಿಗೆ ಸಾಮಾಗ್ರಿ, ಕಾರ್ಕಳ ವಿಜೇಂದ್ರ ಪ್ರಭು ನೀಡಿದ ಬ್ಯಾಗ್, ಮುಂಬಾಯಿ ಅಶ್ವಿನಿ ರಾವ್ ನೀಡಿದ ಕೊಡೆ, ಕಾರ್ಕಳ ಆಟೋರಿಕ್ಷ ಚಾಲಕಮಾಲಕರ ಸಂಘದ ಅಧ್ಯಕ್ಷ, ನ್ಯಾಯವಾದಿ ಸದಾನಂದ ಸಾಲ್ಯಾನ್ ಮತ್ತು ಕರಿಯಕಲ್ಲು ಮಾದವ ಪ್ರಕಾಶ್ ಕ್ಯಾಶ್ಯೂಸ್ನ ದೀಪಾ ನಾಯಕ್ರವರು ನೀಡಿದ ಸಮವಸ್ತ್ರ, ಸೂರಾಲು ಗ್ರಾಮಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.
ವೇದಿಕೆಯಲ್ಲಿ ದಾನಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಜಬೀನ.ಇ ಪ್ರಾಸ್ತಾವಿಕವಾಗಿ ಮಾತನಾಡಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಸುನೀತಾ ಸತೀಶ್ ಪ್ರಮುಖರಾದ ಅಣ್ಣಿ ಮಡಿವಾಳ ಹರೀಶ್ ದೇವಾಡಿಗ ಹಾಗೂ ಶಾಲಾ ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಸಹ ಶಿಕ್ಷಕಿ ಬೇಬಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಕು.ವಿದ್ಯಾಶ್ರೀ ಸ್ವಾಗತಿಸಿ, ಸ್ವಾತಿ ಜೈನ್ ವಂದಿಸಿದರು.
