ಹೆಬ್ರಿ : ಕಲಿಕೆಯಲ್ಲಿ ಬುದ್ಧಿವಂತರಾದವರು ಸರಕಾರಿ ನೌಕರಿ ಸಹಿತ ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ. ಕನಿಷ್ಠ ಸಾಧನೆ ಮಾಡಿದವರು ಸ್ವ ಉದ್ಯೋಗವನ್ನು ಪಡೆಯಲು ಬಯಸುತ್ತಾರೆ. ಮಧ್ಯಮ ಸಾಧನೆ ಮಾಡಿದವರು ಬಯಸಿದ ಕೋರ್ಸ್ ಸಿಗದಿದ್ದರೂ ಜೀವನ ನಿರ್ವಹಣೆಗೆ ಯಾವುದಾದರೊಂದು ದಾರಿಯನ್ನು ಕಂಡುಕೊಳ್ಳುತ್ತಾರೆ. ಹಾಗಾಗಿ ನಾವು ಕಲಿಯುವ ಮಟ್ಟದ ಮೇಲೆಯೇ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತೇವೆ. ವಿದ್ಯಾರ್ಥಿಗಳು ತಮಗೆ ಬೇಕಾದ್ದನ್ನು ಪಡೆದುಕೊಳ್ಳಬೇಕಾದರೆ ಬಾಲ್ಯದಲ್ಲಿಯೇ ಉತ್ತಮ ಗುರಿಯನ್ನು ಇಟ್ಟುಕೊಂಡು ಕಠಿಣ ಪರಿಶ್ರಮ ಪಡಬೇಕು. ಹಾಗಾಗಿ ಭವ್ಯ ಭವಿತವ್ಯಕ್ಕೆ ಸೋಪಾನವಾಗಿರುವ ಪ್ರೌಢಶಾಲಾ ಹಂತದಲ್ಲಿನ ವಿದ್ಯಾರ್ಥಿ ಜೀವನವು ಜೀವನದ ದಿಕ್ಕನ್ನು ಬದಲಾಯಿಸುವ ಕಾಲಘಟ್ಟ. ಇಲ್ಲಿನ ಹದಿಹರೆಯದ ಬದುಕು ಹುಚ್ಚುಕೋಡಿಯಾಗಿರದೇ, ಕಣ್ಣಪಟ್ಟಿ ಕಟ್ಟಿಕೊಂಡ ಕುದುರೆಯಂತಿರಬೇಕು. ಯಕ್ಷಗಾನ, ನಾಟಕ, ನೃತ್ಯ, ಭರತನಾಟ್ಯದಂತಹ ಪಠ್ಯ ಪೂರಕ ಚಟುವಟಿಕೆಗಳಲ್ಲಿ ತೊಡಗಿ, ಶಿಕ್ಷಕರು ಹೇಳಿದ್ದನ್ನು ಗಮನವಿಟ್ಟು ಕೇಳಿ ಶಿಕ್ಷಣದಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಲೆಯ ಹಿರಿಯ ವಿದ್ಯಾರ್ಥಿ ನಾಡ್ಪಾಲು ಸೋಮೇಶ್ವರದ ಜಯಂತ ಎಸ್. ಪಿ. ಹೇಳಿದರು.

ಅವರು ವಿದ್ಯಾಸಾಗರ ಎಜ್ಯುಕೇಶನ್ ಟ್ರಸ್ಟ್ (ರಿ.) ಮುದ್ರಾಡಿ ಪ್ರವರ್ತಿತ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆ ಮುದ್ರಾಡಿಯಲ್ಲಿ 2006-07ನೆಯ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ನೀಡಿದ ಸಮವಸ್ತ್ರದ ವಿತರಣೆ ಮಾಡಿ ಮಾತನಾಡಿದರು.
ಇನ್ನೋರ್ವ ಹಿರಿಯ ವಿದ್ಯಾರ್ಥಿ ಸಾಫ್ಟ್ ವೇರ್ ಇಂಜಿನಿಯರ್ ಬೆಂಗಳೂರು ಅವಿನಾಶ್ ಜಕ್ ನಾಡಿ ಮಾತನಾಡಿ, ಇಂಗ್ಲಿಷ್ ಮಾಧ್ಯಮದ ಭರಾಟೆಯ ನಡುವೆಯೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ನಾವು ಕಲಿತ ಶಾಲೆಯ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.ಇದರ ಹಿಂದೆ ಇಲ್ಲಿನ ಶಿಕ್ಷಕರ ಅಪಾರ ಪರಿಶ್ರಮವಿದೆ. ಅದನ್ನು ನಾವು ಎಂದಿಗೂ ಮರೆಯಬಾರದು. ಇಂದು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ದಂತಹ ಸೇವೆಗಳ ಲಭ್ಯತೆಯಿದೆ. ಚಾಟ್ ಜಿಪಿಟಿ, ಎಐ ಗಳಂತಹ ಹೊಸ ತಂತ್ರಜ್ಞಾನಗಳು ಮಕ್ಕಳು ಇನ್ನಷ್ಟು ಬುದ್ದಿವಂತರಾಗಲು ಅವಕಾಶ ಮಾಡಿಕೊಟ್ಟಿದೆ.ಹಾಗಾಗಿ ಮುಂದಿನ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಇಂದೇ ಸಿದ್ಧರಾಗಿರಿ ಎಂದರು.
ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಂತ್ರಪಲ್ಕೆ ಅಶೋಕ ಪೂಜಾರಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ತಮ್ಮ ಕಲಿತ ಶಾಲೆಯ ಮೇಲೆ ಗೌರವವಿಟ್ಟು ತಮ್ಮ ಸಂಪಾದನೆಯ ಒಂದಂಶವನ್ನು ಕೊಡುಗೆ ನೀಡಿದಾಗ ಮೂಲಭೂತ ಅವಶ್ಯಕತೆಗಳಲ್ಲಿ ಕೆಲವೊಂದನ್ನು ನಾಧಿಸಿಕೊಳ್ಳಲು ಸಾಧ್ಯ. ೨೦೦೬-೦೭ನೇ ಸಾಲಿನ ಈ ವಿದ್ಯಾರ್ಥಿಗಳು ಸರಿ ಸುಮಾರು ೭೫೦೦೦ ರೂ ಗಳಷ್ಟು ಮೌಲ್ಯದ ಸಮವಸ್ತ್ರ ನೀಡಿರುವುದು ಶ್ಲಾಘನೀಯ. ಇವರಿಂದ ಇನ್ನಷ್ಟು ಹೆಚ್ಚಿನ ಕೊಡುಗೆಗಳು ಶಾಲೆಗೆ ಸಿಗುವಂತಾಗಲಿ ಎಂದರು.
೨೦೦೬.೦೭ ರ ಸಾಲಿನ ವಿದ್ಯಾರ್ಥಿಗಳಾದ ಪ್ರಸ್ತುತ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಾಣಾಧಿಕಾರಿಯಾಗಿರುವ ರಾಧಿಕಾ ಹೆಬ್ರಿ, ಮುದ್ರಾಡಿ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ ಉಜೂರು, ಸಾಫ್ಟ್ ವೇರ್ ಇಂಜಿನಿಯರ್ ಉಪ್ಪಳ ಕಾರ್ತಿಕೇಯ, ಸ್ಟ ಉದ್ಯೋಗಿಯಾಗಿರುವ ನವ್ಯ ಶೆಟ್ಟಿ ಮುದ್ರಾಡಿ, ಬೆಳಗುಂಡಿ ಮಾನಸ ಜಿ. ರಾವ್ ಕಾರ್ಕಳ, ಮುದ್ರಾಡಿ ಪಂಚಾಯತ್ ಡಾಟಾ ಎಂಟ್ರಿ ಅಪರೇಟರ್ ಮುದ್ರಾಡಿ ಗುರು ಪ್ರಸಾದ್ ಪೂಜಾರಿ, ಉದ್ಯಮಿ ಪ್ರಸನ್ನ ಆಚಾರ್ಯ ಭಕ್ರೆ, ಗಣೇಶ್ ತುರ್ಕರಬೆಟ್ಟು ಮುದ್ರಾಡಿ, ಸುಕೀರ್ತಿ ಕುಮಾರ್ ದಾರೆಬೆಟ್ಟು ಮುದ್ರಾಡಿ, ಧನಂಜಯ ಮಾತೃಬೆಟ್ಟು ಮುದ್ರಾಡಿ, ಪೂನಾ ಸೌಜನ್ಯ ಶೆಟ್ಟಿ ಬಚ್ಚಪ್ಪು ಅನಿಸಿಕೆ ವ್ಯಕ್ತ ಪಡಿಸಿ ವಿದ್ಯಾರ್ಥಿ ಜೀವನದ ಸಿಹಿ ನೆನಪುಗಳನ್ನು ಬಿಚ್ಚಿಟ್ಟರು. ವಿದ್ಯಾರ್ಥಿ ನಾಯಕ ಪ್ರತೀಕ್ ಹಳೆ ವಿದ್ಯಾರ್ಥಿಗಳ ಕೊಡುಗೆ ನಮ್ಮ ಶಿಕ್ಷಣಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಮುದ್ರಾಡಿ ಉಪ್ಪರಿಗೆ ಮನೆ ಅಶೋಕ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಶ್ಶಾಮಲಾ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಘಪತಿ ಹೆಬ್ಬಾರ್ ವಂದಿಸಿದರು.
ಶಾಲಾ ಶಿಕ್ಷಕರಾದ ಮಹೇಶ ನಾಯ್ಕ ಕೆ., ಕು.ಅನುಷಾ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಕಾನ್ಗುಂಡಿ ಸಹಕರಿಸಿದರು.
