ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ *ಆಲ್ಚಿ* ಯೊಂದಿಗೆ ಸ್ವಾತಂತ್ರೋತ್ಸವ ಸಂಭ್ರಮ.
ಕರ್ತವ್ಯ ಪ್ರಜ್ಞೆ,ನಿಷ್ಠೆ ಹಾಗೂ ವಿಶ್ವಾಸಕ್ಕೆ ಹೆಸರುವಾಸಿಯಾದ ಶ್ವಾನದಳದ *ಆಲ್ಚಿ* ಗೆ ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ಗೌರವಾರ್ಪಣೆ.
ಕಾರ್ಕಳ: ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ದೇಶಭಕ್ತಿ ಹಾಗೂ ರಾಷ್ಟ್ರಪ್ರೇಮದ ಸಂದೇಶದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿಷ್ಠೆ, ಕರ್ತವ್ಯಪ್ರಜ್ಞೆ, ಶಿಸ್ತು ಹಾಗೂ ವಿಶ್ವಾಸಕ್ಕೆ ಹೆಸರುವಾಸಿಯಾದ ಎಎನ್ಎಫ್ನ ಶ್ವಾನ ದಳದ ಆಲ್ಚಿ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂತೋಷ್ ಎಸ್., ಪೊಲೀಸ್ ಇನ್ಸ್ಪೆಕ್ಟರ್, ಎಎನ್ಎಫ್, ಕಾರ್ಕಳ ಇವರು ಉದ್ಘಾಟಿಸಿದರು. ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ದೇಶಪ್ರೇಮ ಮತ್ತು ರಾಷ್ಟ್ರದ ಬಗ್ಗೆ ಗೌರವವನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ವರ್ಧಮಾನ ಶಿಕ್ಷಣ ಸಂಸ್ಥೆಯ ಕಾರ್ಯವೈಖರಿ ಅಭಿನಂದನಾರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಧನಂಜಯ ಹೆಚ್.ಸಿ., ಎಎನ್ಎಫ್, ಕಾರ್ಕಳ ಅವರು ವಿದ್ಯಾರ್ಥಿಗಳಿಗೆ 80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಐಇಡಿ ಪತ್ತೆ, ಬಾಂಬ್ ಶೋಧನೆ, ಪ್ಯಾಟ್ರೋಲಿಂಗ್ ಹಾಗೂ ಅರಣ್ಯ ಕಾರ್ಯಾಚರಣೆಗಳಲ್ಲಿ ವಿಶೇಷ ತರಬೇತಿ ಪಡೆದು, ತನ್ನ ಅತ್ಯುತ್ತಮ ಗ್ರಹಣಶಕ್ತಿ, ನಿಷ್ಠೆ ಹಾಗೂ ಕರ್ತವ್ಯಪ್ರಜ್ಞೆಯ ಮೂಲಕ ನೂರಾರು ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳಿಗೆ ಅಮೂಲ್ಯ ಸಹಕಾರ ನೀಡಿದ ಆಲ್ಚಿ ಎಎನ್ಎಫ್ನಲ್ಲಿ ಸುಮಾರು ಎಂಟು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದೆ. ದೇಶದ ಭದ್ರತೆಗಾಗಿ ಸಲ್ಲಿಸಿದ ಆಲ್ಚಿ ಯ ಅಮೂಲ್ಯ ಸೇವೆಯನ್ನು ಸ್ಮರಿಸಿ ವರ್ಧಮಾನ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಕೆ. ಹೆಗ್ಡೆ ಅವರು ಅತಿಥಿ-ಅಭ್ಯಾಗತರನ್ನು ಸ್ವಾಗತಿಸಿ, ಪ್ರೀತಿಯ ಮಕ್ಕಳೇ… ನೀವೇ ನಮ್ಮ ದೇಶದ ಭವಿಷ್ಯ. ನಿಮ್ಮ ಕೈಯಲ್ಲಿರುವ ಪುಸ್ತಕಗಳು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವ ಸಾಧನಗಳಲ್ಲ. ಅವು ನಿಮ್ಮ ಬದುಕನ್ನು ರೂಪಿಸುವ ಶಕ್ತಿಯಾಗಿದೆ. ಶಿಕ್ಷಣದ ಜೊತೆಗೆ ಶಿಸ್ತು, ಪ್ರಾಮಾಣಿಕತೆ, ದೇಶಪ್ರೇಮ, ಕರುಣೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಕರ್ತವ್ಯ ಜೈನರವರು…*ದೇಶ ನಮ್ಮಿಂದ ಏನು ಪಡೆಯಬೇಕು ಎಂದು ಯೋಚಿಸುವುದಕ್ಕಿಂತ ನಾವು ದೇಶಕ್ಕೆ ಏನು ಕೊಡಬಹುದು ಎಂದು ಯೋಚಿಸೋಣ*.ಎಂದರು.
ಕಾರ್ಯಕ್ರಮದಲ್ಲಿ ಕುಮಾರಯ್ಯ ಹೆಗ್ಡೆ, ಎಸ್ಪಿಎಲ್ ಪುಲಕ್ ರಾಜ್ ಜೈನ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಹೆಡ್ ಗರ್ಲ್ ಕು. ಸನ್ನಿಧಿ ಕಾರ್ಯಕ್ರಮವನ್ನು ನಿರೂಪಿಸಿದರು. ಹೆಡ್ ಬಾಯ್ ಆದೀನ್ ಜೈನ್ ವಂದನಾರ್ಪಣೆ ಸಲ್ಲಿಸಿದರು.
