ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜು ಇದರ 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಜು. 1 ರಂದು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.
ಉದ್ಘಾಟನೆಯನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ, ವಿವೇಕ್ ಆಳ್ವ ನೆರವೇರಿಸಿ ಆಧುನಿಕ ಜೀವನದಲ್ಲಿ ದೊರೆಯುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ದೇಶವನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳು ಮಹತ್ವದ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು. ಜೈನ ಪ್ರೌಢಶಾಲೆಯಲ್ಲಿನ ತನ್ನ ಹೈಸ್ಕೂಲ್ ದಿನಗಳನ್ನು ಮೆಲುಕು ಹಾಕುತ್ತಾ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರೌಢಶಾಲೆಯ ತನ್ನ ಶಿಕ್ಷಕರನ್ನು ನೆನಪಿಸಿಕೊಂಡರು ಹಾಗೂ ವಿದ್ಯಾರ್ಥಿಗಳೂ ಕೂಡಾ ತಮ್ಮ ಜೀವನ ಉಜ್ವಲಗೊಳ್ಳಲು ಕಾರಣೀಕರ್ತರಾದ ಶಿಕ್ಷಕರನ್ನು ಪ್ರೀತಿಸಿ ಹಾಗೂ ಗೌರವಿಸಿ ಎಂದು ಕರೆನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಭಾತ್ ಬಲ್ನಾಡ್ ಸ್ವಾಗತಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು .
ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಕುಮಾರಿ ರಶ್ಮಿನ್ ಖಾನ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಪರಿಚಯಿಸಿದರು. ದಿಗಂಬರ ಜೈನ ವಿದ್ಯಾವರ್ಧಕ ಸಂಘದ ವತಿಯಿಂದ 2025-26 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಸಂಚಾಲಕರು, ಕಾರ್ಯಕ್ರಮದ ಅಧ್ಯಕ್ಷ ಕೆ ಹೇಮರಾಜ್ ಇವರು ನಗದು ಪುರಸ್ಕಾರ ದೊಂದಿಗೆ ಅಭಿನಂದಿಸಿ, ಡಿ.ಜೆ.ವಿ ಸಂಘದ ಆಡಳಿತಕ್ಕೆ ಒಳಪಟ್ಟ ಜೈನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮೌಲ್ಯಯುಕ್ತವಾದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ವಿದ್ಯಾರ್ಥಿಗಳಿಗೆ ಪ್ರತಿಯೊಂದು ಹಂತದಲ್ಲೂ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಕಾಲೇಜಿನ ಅಧ್ಯಾಪಕ ವೃಂದದವರ ಕಠಿಣ ಪರಿಶ್ರಮದಿಂದ ಪ್ರತೀ ವರುಷವೂ ಕಾಲೇಜಿಗೆ ಉತ್ತಮ ಫಲಿತಾಂಶ ಬರುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿ ಸಂಘದ ಮಾರ್ಗದರ್ಶಕ ಉಪನ್ಯಾಸಕರಾದ ಶ್ರೀರಾಮಚಂದ್ರ ಭಟ್ ಇವರು ಅಭಿನಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಕೆ ಯತೀಶ್ ವಂದಿಸಿದರು.
ಕುII ಸಾನಿಕಾ ಆಳ್ವ ಹಾಗೂ ಕುಮಾರಿ ಅನನ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮಂಥನ್ ಬಿ ಶೆಟ್ಟಿ ಹಾಗೂ ಕಾರ್ಯದರ್ಶಿ ಕುಮಾರಿ ಶ್ರಾವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
