ಕಾರ್ಕಳ: ರೋಟರಿ ಕ್ಲಬ್ ಕಾರ್ಕಳದ ವತಿಯಿಂದ ಅಧ್ಯಕ್ಷ ಪಿಹೆಚ್ಎಫ್ ಕೆ. ನವೀನ್ ಚಂದ್ರ ಶೆಟ್ಟಿ ಅವರ ಅಧ್ಯಕ್ಷೀಯ ಅವಧಿಯ ಸೇವಾ ಪಯಣವನ್ನು ಸ್ಮರಿಸುವ “ಥ್ಯಾಂಕ್ಸ್ ಗಿವಿಂಗ್” ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್ ಅವರು ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರ ಸೇವಾ ನಾಯಕತ್ವವನ್ನು ಶ್ಲಾಘಿಸಿ, ಒಂದು ವರ್ಷದ ಅವಧಿಯಲ್ಲಿ ಸಮಾಜಮುಖಿ ಹಾಗೂ ಪರಿಣಾಮಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಪಿಹೆಚ್ಎಫ್ ಕೆ. ನವೀನ್ ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಅವರು ತಮ್ಮ ರೋಟರಿ ಪಯಣವನ್ನು ನೆನಪಿಸಿಕೊಂಡು, ಕಾಲೇಜು ದಿನಗಳಲ್ಲಿ ರೊಟ್ರಾಕ್ಟ್ನಿಂದ ಆರಂಭವಾದ ಸೇವಾ ಮನೋಭಾವವು 2002ರಲ್ಲಿ ರೋಟರಿ ಸದಸ್ಯತ್ವಕ್ಕೆ ಕಾರಣವಾಯಿತು ಎಂದು ಹೇಳಿದರು. “ನಾನು ರೋಟರಿಯನ್ನು ಬಿಟ್ಟಿಲ್ಲ, ರೋಟರಿ ನನ್ನನ್ನು ಬಿಟ್ಟಿಲ್ಲ” ಎಂಬ ಮಾತಿನೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡ ಅವರು, ಅಧ್ಯಕ್ಷನಾಗುವುದು ತಮ್ಮ ಕನಸಾಗಿರಲಿಲ್ಲ. ಆದರೆ ಸದಸ್ಯರ ವಿಶ್ವಾಸ ಮತ್ತು ಪ್ರೋತ್ಸಾಹದಿಂದ ಈ ಜವಾಬ್ದಾರಿಯನ್ನು ಸ್ವೀಕರಿಸಿ, ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು.
ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಕ್ಲಬ್ ಸದಸ್ಯರ ಸಹಕಾರದೊಂದಿಗೆ ಒಟ್ಟು 412 ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದಾಗಿ ತಿಳಿಸಿದ ಅವರು, ನಾಗರಬಾವಿ ಉನ್ನತೀಕರಣ, ನವೀಕೃತ ರೋಟರಿ ಪಾರ್ಕ್, ರಕ್ತದಾನ ಶಿಬಿರಗಳು, ನೇತ್ರ ತಪಾಸಣೆ ಮತ್ತು ನೇತ್ರ ಚಿಕಿತ್ಸಾ ಶಿಬಿರಗಳು, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ವಿವಿಧ ಯೋಜನೆಗಳು, ಯುವಜನರ ನಾಯಕತ್ವ ಬೆಳೆಸುವ ಕಾರ್ಯಕ್ರಮಗಳು ಸೇರಿದಂತೆ ಅನೇಕ ಜನಪರ ಸೇವಾ ಕಾರ್ಯಗಳನ್ನು ಉಲ್ಲೇಖಿಸಿದರು.
ಈ ಸಾಧನೆಗಳು ತಮ್ಮೊಬ್ಬರ ಪರಿಶ್ರಮದಿಂದ ಸಾಧ್ಯವಾಗಿಲ್ಲ; ಕಾರ್ಯಕಾರಿ ಸಮಿತಿ, ನಿರ್ದೇಶಕರು, ಮಾಜಿ ಅಧ್ಯಕ್ಷರು, ಸದಸ್ಯರು, ಆನ್ಸ್, ರೊಟ್ರಾಕ್ಟ್ ಸದಸ್ಯರು, ಕುಟುಂಬದವರು ಹಾಗೂ ಪ್ರತಿಯೊಬ್ಬರ ಸಹಕಾರವೇ ಈ ಯಶಸ್ಸಿನ ಮೂಲ ಎಂದು ಅವರು ಕೃತಜ್ಞತೆಯಿಂದ ಸ್ಮರಿಸಿದರು.
ಈ ವರ್ಷದ “ಯುನೈಟ್ ಫಾರ್ ಗುಡ್” ಧ್ಯೇಯವಾಕ್ಯದಂತೆ ಎಲ್ಲರ ಒಗ್ಗಟ್ಟಿನಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈ ಸಾಲಿನ ಅಸಿಸ್ಟೆಂಟ್ ಗವರ್ನರ್ ವಿಘ್ನೇಶ್ ಶೆಣೈ, ಜೋನಲ್ ಲೆಫ್ಟಿನೆಂಟ್ ಜಾನ್ ಆರ್. ಡಿ. ಸಿಲ್ವಾ, ಆನ್ಸ್ ಕ್ಲಬ್ ಅಧ್ಯಕ್ಷೆ ಜಯಂತಿ ನಾಯಕ್, ಕಾರ್ಯದರ್ಶಿ ಚೇತನ್ ನಾಯಕ್, ರೊಟ್ರಾಕ್ಟ್ ಅಧ್ಯಕ್ಷ ಸಂದೇಶ್ ಹಾಗೂ ಮಾಜಿ ಅಧ್ಯಕ್ಷರು, ಸದಸ್ಯರು, ಆನ್ಸ್ ಸದಸ್ಯೆಯರು ಮತ್ತು ಗಣ್ಯರು ಉಪಸ್ಥಿತರಿದ್ದರು.
