ಮೂಡುಬಿದಿರೆ: ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯ 29ನೇ ವರ್ಷದ ಯಕ್ಷ ಸಂಭ್ರಮ ಕಾರ್ಯಕ್ರಮವು ಮೂಡುಬಿದಿರೆ ಪ್ರೀತಮ್ ಗಾರ್ಡನ್ ಸಭಾಭವನದಲ್ಲಿ ಜು. 17ರಂದು ಜರಗಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರ ಉಪಸ್ಥಿತಿಯಲ್ಲಿ, ಮಂಡಳಿಯ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವಿಶ್ರಾಂತ ಯಕ್ಷಗಾನ ಕಲಾವಿದ ಕೆ. ಎಚ್. ದಾಸಪ್ಪ ರೈಯವರಿಗೆ 2026ನೇ ಸಾಲಿನ ಯಕ್ಷದೇವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.
ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಈ ಸಂದರ್ಭದಲ್ಲಿ ಯಕ್ಷಗಾನ ಸಂಸ್ಕಾರ ನೀಡುವ ಕಲೆ. ಯಕ್ಷಗಾನದಂತಹ ಕಲಾ ಮಾಧ್ಯಮಗಳು ಹಾದಿ ತಪ್ಪುತ್ತಿರುವ ಸಮಾಜವನ್ನು ಸರಿದಾರಿಗೆ ತರಲು ಪೂರಕವಾಗಿದೆ. ಮಕ್ಕಳಲ್ಲಿ ಇಂತಹ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ನಡೆಯಬೇಕು ಎಂದರು.
ಕರ್ನಾಟಕ ಬ್ಯಾಂಕ್ ಲಿ. ನ ಮಹಾಪ್ರಭಂಡಕರಾದ ನಾಗರಾಜ ಉಪಾಧ್ಯಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರು ಮಾತನಾಡಿ ಧರ್ಮವನ್ನು ತಿಳಿಸಲು ಯಕ್ಷಗಾನ ಉತ್ತಮ ಮಾಧ್ಯಮ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ ಎಂ.,ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಶುಭ ಹಾರೈಸಿದರು. ಮಂಡಳಿಯ ಸ್ಥಾಪಕ ಅಧ್ಯಕ್ಷ ಎಂ. ದೇವಾನಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಮಂಡಳಿಯ ಉಪಾಧ್ಯಕ್ಷ ಬೊಕ್ಕಸ ಚಂದ್ರಶೇಖರ ರಾವ್, ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ ಉಪಸ್ಥಿತರಿದ್ದರು. ನಂದಳಿಕೆ ಸುಬ್ರಹ್ಮಣ್ಯ ಬೈಪಡಿತ್ತಾಯ ಸನ್ಮಾನಪತ್ರ ವಾಚಿಸಿದರು. ವೀಣಾ ಡಿ. ಭಟ್ ಮತ್ತು ಭಾಗ್ಯಲಕ್ಷ್ಮಿ ಸುರೇಶ್ ಚಂದ್ರ ಪ್ರಾರ್ಥಿಸಿದರು. ನೆಲ್ಲಿಮಾರು ಸದಾಶಿವರಾವ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಮುಂಚಿತವಾಗಿ ನಂದಳಿಕೆ ಸುಬ್ರಹ್ಮಣ್ಯ ಬೈಪಡಿತ್ತಾಯ ಸಾರಥ್ಯದಲ್ಲಿ ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ ಹಾಗೂ ನಂತರ ಶ್ರೀ ಕ್ಷೇತ್ರ ಹಾಲಾಡಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಪಂಜರ ಪಕ್ಷಿ ಯಕ್ಷಗಾನ ನಡೆಯಿತು.
