ಕಾರ್ಕಳ ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘ (ನಿ.) ಕಾರ್ಕಳ ಜೋಡುರಸ್ತೆ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಆ. 01ರಂದು ಜೋಡುರಸ್ತೆ ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಜಲಜಾ ಬಾಲಕೃಷ್ಣರವರು ವಹಿಸಿ ಮಾತನಾಡಿ ಠೇವಣಿದಾರರು ನಮ್ಮ ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವೇ ನಮ್ಮ ಸಂಸ್ಥೆ ಬೆಳೆಯಲು ಕಾರಣ. ಸಾಲಗಾರರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿ ಸಹಕರಿಸಬೇಕು. ಇನ್ನಷ್ಟು ಸ್ವಸಹಾಯ ಗುಂಪುಗಳನ್ನು ರಚಿಸಿ, ವಿವಿಧ ಉದ್ದೇಶಗಳಿಗೆ ಸಾಲಗಳನ್ನು ವಿನಿಯೋಗಿಸಿ ಅದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಉತ್ತಮ ವ್ಯವಹಾರ ಮಾಡಿದ ೯ ಗುಂಪುಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಉಪಾಧ್ಯಕ್ಷರಾದ ಶ್ರೀಮತಿ ಮಾಧವಿ ಕೆ. ಸ್ವಾಗತಿಸಿದರು. ನಿರ್ದೇಶಕರಾದ ದೇವಕಿ ಶೆಟ್ಟಿ, ವನಜ ಆಚಾರ್ಯ, ಲಕ್ಷ್ಮೀ ವಿ. ದೇವಾಡಿಗ, ಮಮತಾ ಪಿ., ನಿರ್ಮಲ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮಂಜುಳಾ ಶ್ರೀನಿವಾಸ್ ಹೆರ್ಮುಂಡೆ ಕಾರ್ಯಕ್ರಮ ನಿರೂಪಿಸಿ ವರದಿ ವಾಚಿಸಿದರು. ನಿರ್ದೇಶಕಿ ಶ್ರೀಮತಿ ವಿ. ವಿದ್ಯಾವತಿ ರಾವ್ ವಂದಿಸಿದರು.
