🔴ಶಿವಪುರ ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದ ಮನೆ ತೆರಿಗೆಯಲ್ಲಿ ವಸೂಲಾದ 7.50 ಲಕ್ಷ ರೂಪಾಯಿ ದುರುಪಯೋಗ.*
🔴ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ.*
🔴ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು.*
ಉಡುಪಿ : ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿಯ ಬಿಲ್ಲು ವಸೂಲಿಗನಾದ ಗ್ರಾಮ ಪಂಚಾಯತಿ ಸಿಬ್ಬಂದಿ ಮಂಜುನಾಥ್ ಎಂಬವರು ಮನೆ ತೆರಿಗೆಯಲ್ಲಿ ವಸೂಲಾದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಹಣದ ದುರ್ಬಳಕೆ ಮಾಡಿಕೊಂಡು ನಂಬಿಕೆ ದ್ರೋಹ ಎಸಗಿರುವುದು ಕಂಡು ಬಂದಿದ್ದು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಂಜುನಾಥ ಅವರನ್ನು ಬುಧವಾರ ಸೇವೆಯಿಂದ ವಜಾ ಗೊಳಿಸಿ ಆದೇಶ ನೀಡಿದ್ದಾರೆ.
ಹಣದ ದುರ್ಬಳಕೆ ಮಾಡಿದ ಬಗ್ಗೆ ಶಿವಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಶೋಕ್ ಅವರು ಗುರುವಾರ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ವಂಚನೆ ಪ್ರಕರಣ ದಾಖಲಾಗಿದೆ. 40 ವರ್ಷ ಪ್ರಾಯದ ಮಂಜುನಾಥ್ ಶಿವಪುರ ಸುಮಾರು 7.50 ಲಕ್ಷ ರೂಪಾಯಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರ್ಬಳಕೆ ಮಾಡಿದ್ದರು. ಪ್ರಕರಣ ಗಮನಕ್ಕೆ ಬಂದ ಬಳಿಕ ವಿಚಾರಣೆ ನಡೆಸಿದ ಶಿವಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಶೋಕ್ ಮಂಜುನಾಥ್ ಗೆ ನೋಟೀಸ್ ನೀಡಿದ್ದು ಸುಮಾರು 3 ಲಕ್ಷ ರೂಪಾಯಿಯನ್ನು ಪಂಚಾಯಿತಿಗೆ ಮರು ಪಾವತಿ ಮಾಡಿದ್ದರು. ಉಳಿದ ಹಣವನ್ನು ಪಾವತಿ ಮಾಡದೆ ವಂಚಿಸಿದ್ದಾರೆ ಎಂದು ಪಿಡಿಒ ಮಾಹಿತಿ ನೀಡಿದ್ದಾರೆ.
ಇದೀಗ ಶಿವಪುರ ಗ್ರಾಮ ಪಂಚಾಯತಿಯಲ್ಲಿ ಬಿಲ್ಲು ವಸೂಲಿಗನಾದ ಪಂಚಾಯತ್ ಸಿಬ್ಬಂದಿ ಮಂಜುನಾಥ 2023-24 ನೇ ಸಾಲಿನಲ್ಲಿ 1,18,367 ರೂ ಹಣ ಹಾಗೂ 2024-25 ರಲ್ಲಿ 3,36,021 ರೂ ಮನೆ ತೆರಿಗೆಯಲ್ಲಿ ವಸೂಲಾದ ಒಟ್ಟು 4,54,388 ರೂ ಹಣವನ್ನು ಪಂಚಾಯತಿ ಬ್ಯಾಂಕ್ ಖಾತೆಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡು ಹಣದ ದುರ್ಬಳಕೆ ಮಾಡಿಕೊಂಡು ನಂಬಿಕೆ ದ್ರೋಹ ಎಸಗಿ ಮೋಸ ಮಾಡಿದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
