ಕಾರ್ಕಳ: ಕಲ್ಯಾ ಗ್ರಾಮದ ಸಿಎಮ್ಎಸ್ ಸ್ಟೋನ್ ಕ್ರಶರ್ನಲ್ಲಿ ಪರವಾನಿಗೆ ಇಲ್ಲದೆ ಕಲ್ಲುಗಳನ್ನು ಹೊಡೆದು ಕ್ರಶರ್ನಲ್ಲಿ ಜಲ್ಲಿ ಮತ್ತು ಎಂ ಸ್ಯಾಂಡ್ ಆಗಿ ಪರಿವರ್ತಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ಪ್ರಕರಣ ದಾಖಲಾದ ಘಟನೆ ಸೆ. 11ರಂದು ವರದಿಯಾಗಿದೆ.
ಕಾರ್ಕಳ ಎಎಸ್ಪಿಯವರಿಗೆ ಕಲ್ಯಾ ಸಿಎಮ್ಎಸ್ ಸ್ಟೋನ್ ಕ್ರಶರ್ನಲ್ಲಿ ಅಕ್ರಮದ ಬಗ್ಗೆ ಮಾಹಿತಿ ಬಂದ ಮೇರೆಗೆ ಅವರ ಆದೇಶದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್. ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಕಲ್ಲುಗಳನ್ನು ತುಂಡು ಮಾಡುವ ಯಂತ್ರಗಳನ್ನು ಇಟಾಚಿ, ಲಾರಿ, ಟಿಪ್ಪರ್ಗಳು ಮತ್ತು ಸುಮಾರು ೨೦ ಲೋಡ್ ನಷ್ಟು ಜಲ್ಲಿ ಹಾಗೂ ಬಂಡೆ ಕಲ್ಲುಗಳನ್ನು ಪುಡಿ ಮಾಡುವ ಮತ್ತು ಜಲ್ಲಿಗಳಾಗಿ ಪರಿವರ್ತಿಸುವ ಶಾಶ್ವತವಾಗಿ ಜೋಡಿಸಿರುವ ದೊಡ್ಡ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳದಲ್ಲಿದ್ದ ಲಾರಿ ಚಾಲಕ ಜಗದೀಶ್ ಬಳಿ ವಿಚಾರಿಸಿದಾಗ ಮೊಹಮ್ಮದ್ ಶಫಿ ಮತ್ತು ರಂಜಿತ್ ಸಂಘಟಿತರಾಗಿ ಪರವಾನಿಗೆ ಇಲ್ಲದೇ ಕ್ವಾರೆಯಿಂದ ಕಲ್ಲುಗಳನ್ನು ತುಂಡರಿಸಿ ಕ್ರಶರ್ಗೆ ಸಾಗಾಟ ಮಾಡಿ ಪುಡಿ ಮಾಡಿ ಯಾವುದೇ ಪರವಾನಿಗೆಯನ್ನು ಹೊಂದದೇ ಮಾರಾಟ ಮಾಡುತ್ತಿರುವ ಬಗ್ಗೆ ಕಂಡುಬಂದಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
