ಮದ್ಯ ಮಾರಾಟ ನಿಷೇಧ
ಉಡುಪಿ ಸೆಪ್ಟಂಬರ್ 12 (ಕ.ವಾ): ಸೆ. 14 ರಿಂದ ಜಿಲ್ಲೆಯಾದ್ಯಂತ ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸದರಿ ದಿನದಂದು ಹೆಚ್ಚಿನ ಸ್ಥಳಗಳಲ್ಲಿ ಗಣೇಶ ವಿಸರ್ಜನೆಯು ನಡೆಯಲಿರುವುದರಿಂದ ಸೆ. 14 ರಂದು ಜಿಲ್ಲಾದ್ಯಂತ, ಸೆ. 16 ರಂದು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಸೆ. 18 ರಂದು ಕುಂದಾಪುರ ನಗರ, ಗಂಗೊಳ್ಳಿ ಮತ್ತು ಕಾಪು ಠಾಣಾ ವ್ಯಾಪ್ತಿಯಲ್ಲಿ ಅತೀ ಸೂಕ್ಷ್ಮ/ಸೂಕ್ಷ್ಮ ಗಣಪತಿ ವಿಸರ್ಜನೆ ನಡೆಯಲಿರುವುದರಿಂದ ಸದರಿ ದಿನಗಳಂದು ಗಣೇಶ ವಿಗ್ರಹ ವಿಸರ್ಜನೆ ನಡೆಯುವ ಸಮಯದಲ್ಲಿ ಬಾರ್ ಮತ್ತು ವೈನ್ಶಾಪ್ಗಳು ತೆರೆದಿದ್ದಲ್ಲಿ, ಮದ್ಯಪಾನಾಸಕ್ತರು ಮದ್ಯಪಾನಮಾಡಿ ಗಲಭೆ ಮಾಡುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ, ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿಯ ಮದ್ಯ ಮಾರಾಟ) ನಿಯಮಗಳು 1968 ರ ನಿಯಮ 3 ರಡಿ ನೀಡಿರುವ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸೆ. 14 ರಂದು ಜಿಲ್ಲೆಯಾದ್ಯಂತ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ, ಸೆ. 16 ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 12 ರ ವರೆಗೆ ಉಡುಪಿ ನಗರ ಠಾಣಾ ವ್ಯಾಪ್ತಿಯ ಮೂಡ ನಿಡಂಬೂರು, ಶಿವಳ್ಳಿ, ಅಂಬಲಪಾಡಿ ಮತ್ತು ಪುತ್ತೂರು ಗ್ರಾಮಗಳ ವ್ಯಾಪ್ತಿಗಳಲ್ಲಿ ಮತ್ತು 18 ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 12 ರ ವರೆಗೆ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ, ಹೊಸಾಡು ಮತ್ತು ತ್ರಾಸಿ ಗ್ರಾಮಗಳ ವ್ಯಾಪ್ತಿಗಳಲ್ಲಿ, ಕುಂದಾಪುರ ನಗರ ಠಾಣಾ ವ್ಯಾಪ್ತಿಯ ಕಸಬಾ, ವಡೇರಹೋಬಳಿ ಮತ್ತು ಕೋಟೇಶ್ವರ ಗ್ರಾಮಗಳ ವ್ಯಾಪ್ತಿಗಳಲ್ಲಿ ಮತ್ತು ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮಜೂರು, ಮಲ್ಲಾರು ಮತ್ತು ಮುಳೂರು ಗ್ರಾಮಗಳ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಪ್ಗಳ ಮದ್ಯ ಮಾರಾಟವನ್ನು ನಿಷೇಧಿಸಿ ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಈ ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಒಣದಿನ (Dry Day) ಎಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಿ, ಜಿಲ್ಲಾ ದಂಡಾಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅದೇಶಿಸಿರುತ್ತಾರೆ.
