ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಮೂಡುಬಿದಿರೆಯಲ್ಲಿ ಅಸ್ತಿತ್ವಕ್ಕೆ ತಂದ ಬಗರ್ ಹುಕುಂ ಅಕ್ರಮ ಸಕ್ರಮ ಸಮಿತಿ ಅಸ್ತಿತ್ವಕ್ಕೆ ಬಂದು ವರ್ಷ ಎರಡು ಕಳೆದರೂ ಈವರೆಗೆ ಒಂದೇ ಒಂದು ಸಭೆ ನಡೆಸದಿರುವುದಕ್ಕೆ ಸದಸ್ಯ ಮಿತ್ತಬೈಲು ವಾಸುದೇವ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಸದಸ್ಯರಾದ ಕರುಣಾಕರ, ಮರಿಟಾ ಮಿನೇಜಸ್ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಮಿತಿ ಅಧ್ಯಕ್ಷರಾಗಿರುವ ಶಾಸಕ ಉಮಾನಾಥ ಕೋಟ್ಯಾನ್ ಅವರು ದಿನಾಂಕ ನಿಗದಿಪಡಿಸದಿರುವುದರಿಂದ ಸಭೆ ನಡೆಸಲಾಗುತ್ತಿಲ್ಲ ಎಂದು ದೂರಿದರು. ಈ ಸಭೆಯಲ್ಲಿ ವಿಲೇವಾರಿಯಾಗಬೇಕಾದ ಸಾವಿರಾರು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಸರಕಾರಿ ಜಾಗದಲ್ಲಿ ಕೃಷಿ ಮಾಡಿಕೊಂಡು ಜಾಗದ ದಾಖಲೀಕರಣಕ್ಕೆ ಕಾಯುತ್ತಿರುವ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಮೂನೆ 50, 53 ಹಾಗೂ 57 ರಡಿಯಲ್ಲಿ ಅರ್ಜಿ ಸಲ್ಲಿಸಿದವರು ಸಕ್ರಮೀಕರಣಕ್ಕಾಗಿ ಕಾಯುತ್ತಿರುವುದನ್ನು ಅವರು ಉಲ್ಲೇಖಿಸಿದರು.

ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಲು ಉತ್ಸಾಹ ತೋರಿದ ತಹಶೀಲ್ದಾರ್ ಈಗಾಗಲೇ 80ರಷ್ಟು ಫೈಲ್ ಗಳನ್ನು ದಾಖಲೆಯೊಂದಿಗೆ ತಯಾರಿಸಿ ಇಟ್ಟಿರುವುದಾಗಿ ವಾಸುದೇವನಾಯಕ್ ಹೇಳಿದರು. ಶಾಸಕರಲ್ಲಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಯವರು ಸಭೆ ನಡೆಸುವಂತೆ ಕೋರಿಕೊಂಡಿರುವುದಾಗಿಯೂ ಅವರು ತಿಳಿಸಿದರು. ಶಾಸಕರು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿಯೂ ಅವರು ಕೋರಿದರು.

