ದೀನ ದಲಿತರ ಸೇವೆ ಸಹಕಾರಿ ವ್ಯವಸ್ಥೆಯಿಂದ ಸಾಧ್ಯ. ಅಶಕ್ತರಿಗೆ ಶಕ್ತಿ ತುಂಬುವುದೇ ಸಹಕಾರದ ಧೋರಣೆ. ಸ್ವಸಹಾಯ ಸಂಘಟನೆಗಳಿಂದ ಸಾಲ ಪಡೆದು, ಅದನ್ನು ನಿಗದಿತ ಸಮಯದಲ್ಲಿ ಮರುಪಾವತಿಸುವುದು ಸದಸ್ಯರ ಕರ್ತವ್ಯ. ಈ ಮೂಲಕ ಇತರರ ಆರ್ಥಿಕ ಸಬಲೀಕರಣಕ್ಕೂ ಕೊಡುಗೆ ನೀಡಿದಂತಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.

ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ಆದರ್ಶ ಗ್ರಾಮಾಭಿವೃದ್ಧಿ ಹಾಗೂ ಸೇವಾ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿ, ಸಹಕಾರಿ ತತ್ವದಿಂದಾಗಿ ದೇಶ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದೆ. ಮಹಿಳಾ ಸಬಲೀಕರಣವಾದರೆ ದೇಶ ಪ್ರಗತಿ ಸಾಧಿಸುತ್ತದೆ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ವಸಹಾಯ ಸಂಘಗಳು ಸಾಮಾನ್ಯರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಸಹಕಾರಿ ಕ್ಷೇತ್ರದ ಮುಖೇನ ಕಳೆದ 25 ವರ್ಷಗಳಿಂದ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಆದರ್ಶ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗೀಸ್ ಅವರಿಗೆ ಮುಂದೆ ರಾಜ್ಯ ಸಹಕಾರಿ ರತ್ನ ಪ್ರಶಸ್ತಿಗೆ ಕೊಡಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಹಿರಿಯ ಕಾರ್ಯಕರ್ತರ ದರ್ಶಿನಿ ಹಾಗೂ ಜಯಂತಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಮುಡಾರು ವಲಯ ಪ್ರಥಮ, ಬೆಳುವಾಯಿ ವಲಯ ದ್ವಿತಿಯ ಸ್ಥಾನಿಯಾಗಿ ಬಹುಮಾನ ವಿತರಿಸಲಾಯಿತು.
ಸಂತೋಷ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು.
ಆದರ್ಶ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗೀಸ್ ಪ್ರಾಸ್ತಾವನೆಗೈದರು. ನಿರ್ದೇಶಕರಾದ ಹಸ್ದುಲ್ಲಾ ಇಸ್ಮಾಯಿಲ್, ಶರ್ಲಿ ಟಿ.ಬಾಬು ಉಪಸ್ಥಿತರಿದ್ದರು.
ನಿರ್ದೇಶಕ ಇಮಾನ್ಯುವೆಲ್ ಮೋನಿಸ್ ಮತ್ತು ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಸಂಯೋಜಕ ಗಣೇಶ್ ಬಾರ್ದಿಲ ವಂದಿಸಿದರು.
ರಜತಮಹೋತ್ಸವದ ಅಂಗವಾಗಿ ಮೂಡುಬಿದಿರೆ ಜ್ಯೋತಿನಗರದಿಂದ ಪ್ರಾರಂಭಗೊ0ಡು, ಪೇಟೆಯ ಮುಖ್ಯ ರಸ್ತೆಯಲ್ಲಿ ಸಾಗಿ ಸಮಾಜಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಿತು.
