ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಸಿದ್ಧತೆಯಲ್ಲಿರುವ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ಜೀರ್ಣೋದ್ಧಾರ ನಿಧಿಗೆ ಕಲ್ಲಬೆಟ್ಟು ಗಣೇಶ ಸೇವಾ ಟ್ರಸ್ಟ್, ಗಣೇಶೋತ್ಸವ ಸಮಿತಿ, ಸ್ವರ್ಣಗೌರಿ ಮಾತೃಮಂಡಳಿ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ವತಿಯಿಂದ ಏಪ್ರಿಲ್ 5ರಂದು ದೇಣಿಗೆ ಅರ್ಪಿಸಲಾಯಿತು.
ಶ್ರೀ ಗಣೇಶ ಸೇವಾ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾಸಮಿತಿ ಅಧ್ಯಕ್ಷ, ಹಿರಿಯ ವಕೀಲ ಎಂ. ಬಾಹುಬಲಿ ಪ್ರಸಾದ್ ಗಣೇಶ ಸೇವಾ ಟ್ರಸ್ಟ್ ವತಿಯಿಂದ 25 ಸಾವಿರ ರೂ., ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ 10 ಸಾವಿರ ರೂ. ಹಾಗೂ ವೈಯಕ್ತಿಕವಾಗಿ 25 ಸಾವಿರ ರೂ. ಸೇರಿ ಒಟ್ಟು 60 ಸಾವಿರ ರೂ.ಗಳ ಚೆಕ್ಕನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜೀವಂಧರ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಂಭು ಎನ್. ಶೆಟ್ಟಿ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟರಾಜ ಆಸ್ರಣ್ಣ, ಹೊಸಂಗಡಿ ಅರಮನೆ ಸುಕುಮಾರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಶೆಟ್ಟಿ, ಕಲ್ಲಬೆಟ್ಟು ಪೂಜಾ ಸಮಿತಿಗಳ ಪದಾಧಿಕಾರಿಗಳಾದ ಕೆ. ಪ್ರದೀಪ್ ರೈ ತೆಂಕಬೆಟ್ಟುಗುತ್ತು, ಜಿ.ಕೆ. ಭಟ್, ಯೋಗೀಶ್ ಪೈ, ಸತೀಶ್ ಶೆಟ್ಟಿ, ವಿಶಾಲ ಮಾರೂರು, ಮಾಜಿ ಪುರಸಭಾ ಸದಸ್ಯ ದಿನೇಶ್ ಮಾರೂರು ಉಪಸ್ಥಿತರಿದ್ದರು.
