ಕಾರ್ಕಳ: ದೇವಸ್ಥಾನಗಳಲ್ಲಿ ಅನ್ನದಾನ ನಿಧಿಯಂತೆ ವಿದ್ಯಾದಾನ ನಿಧಿಯನ್ನು ಸ್ಥಾಪಿಸಿ ಆ ಮೂಲಕ ಬಡ ಪ್ರತಿಭಾವಂತ ಮಕ್ಕಳನ್ನು ಪ್ರೊತ್ಸಾಹಿಸುವಂತೆ ಕೇಮಾರು ಸಾಂದೀಪಾನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿಯವರು ಹೇಳಿದರು.
ನಕ್ರೆ ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. ೨೩ ರಂದು ನಡೆದ ಬ್ರಹ್ಮಕುಂಭಾಭಿಷೇದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ಕೇಂದ್ರಗಳ ಮೂಲಕ ಶೈಕ್ಷಣಿಕತೆಗೆ ಒತ್ತು ನೀಡುವಂತಾಗಬೇಕೆಂದರು. ಇಂದಿನ ದಿನಗಳಲ್ಲಿ ಕೂಡು ಕುಟುಂಬ ಪದ್ಧತಿಯು ಒಡೆದು ಹೋಗುತ್ತಿದೆ ಸಂಬಂಧಗಳ ನಡುವೆ ಸಾಮರಸ್ಯ ಇಲ್ಲದಂತಾಗಿದೆ.ಹೆತ್ತವರು ಆಶ್ರಮದಲ್ಲಿ, ಮಕ್ಕಳು ಹಾಸ್ಟೆಲ್ನಲ್ಲಿ, ಯಜಮಾನ ಮನೆಯಲ್ಲಿ ಒಂಟಿತನದಿಂದ ಬದುಕುವಂತಾಗಿದ್ದು ಸಂಸ್ಕಾರ, ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದೆವೆ ಎಂದರು. ಪ್ರತಿಯೊಬ್ಬರ ಬದುಕು ಯಾಂತ್ರಿಕವಾಗಿದೆ ಈ ನಡುವೆ ಧಾರ್ಮಿಕ ವಿಚಾರಗಳು ಮುಂದಿನ ಪೀಳಿಗೆಗೆ ತಿಳಿಯಪಡಿಸಬೇಕಾಗಿದೆ ಎಂದರು.
ದೇವಸ್ಥನದ ಆಡಳಿತ ಮೊಕ್ತೇಸರರಾದ ನಕ್ರೆ ವರ್ಣಬೆಟ್ಟು ಎನ್ ಮುತ್ತಯ್ಯ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕ ಸುನಿಲ್ ಕುಮಾರ್ ಭಾಗವಹಿಸಿ ಮಾತನಾಡಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಕಲಶೋತ್ಸವ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬೇರೆ ಜಿಲ್ಲೆಗೆ ಹೋದಾಗ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಕಾಣದಿಲ್ಲ. ಇಲ್ಲಿಯ ದಾನಿಗಳ ಸಹಕಾರದಿಂದ ದೇವಸ್ಥಾನಗಳು ಹಾಗೂ ಶಾಲೆಗಳು ಹೆಚ್ಚಿನ ಅಭಿವೃದ್ಧಿ ಕಂಡಿದೆ ಎಂದರು.
ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಮಾತನಾಡಿ ತುಳುನಾಡು ಭೂಲೋಕದ ಸ್ವರ್ಗ ಮನುಷ್ಯನಿಗೆ ವಾಸಿಸಲು ಇದಕ್ಕಿಂತ ಒಳ್ಳೆಯ ಜಾಗ ಜಗತ್ತಿನಲ್ಲಿ ಬೇರೊಂದಿಲ್ಲ ಇಲ್ಲಿ ಬದುಕುವ ನಾವೆಲ್ಲರೂ ಪುಣ್ಯವಂತರು ಎಂದರು. ಧಾರ್ಮಿಕತೆಯ ವಿಚಾರದೊಂದಿಗೆ ಆ ಊರಿನ ಜನರ ಕಷ್ಟಕಾರ್ಪಣ್ಯಗಳಲ್ಲಿ ಕೈಜೋಡಿಸಿದಾಗ ಊರು ಅಭಿವೃದ್ಧಿ ಗೊಳ್ಳುತ್ತದೆ ಎಂದರು.
ನಕ್ರೆ ಚರ್ಚ್ನ ಧರ್ಮಗುರುಗಳಾದ ವಂ. ಲೂಯಿಸ್ ಡೇಸಾ, ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಹಯವದನ ತಂತ್ರಿ, ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಎನ್. ರಮೇಶ್ ಭಟ್, ನಿವೃತ್ತ ಶಿಕ್ಷಕರಾದ ಎನ್. ಬಿಪಿನ್ ಚಂದ್ರಪಾಲ್, ವಸಂತ ನಾಯ್ಕ್ ಕೊಲ್ಲಬೆಟ್ಟು, ಪ್ರವೀಣ್ಚಂದ್ರ ಶೆಟ್ಟಿ ಹಾಗೂ ದಾನಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು, ರಘು ಆಚಾರ್ಯ ನಿರೂಪಿಸಿದರು. ರವೀಂದ್ರ ಪೂಜಾರಿ ಸ್ವಾಗತಿಸಿ ವಂದಿಸಿದರು. ರಾತ್ರಿ ರಂಗಪೂಜೆ, ದೀಪಾ ರಾದನೆ, ಉತ್ಸವ ಬಲಿ ನಡೆಯಿತು.
