ಹೆಬ್ರಿ ತಾಲ್ಲೂಕಿನಾದ್ಯಾಂತ ಮಂಗಳವಾರ ರಾತ್ರಿ 8.45ಹೊತ್ತಿಗೆ ಸುರಿದ ಭಾರೀ ಗಾಳಿ ಮಳೆಗೆ ಹಲವಾರು ಮರಗಳು ಬಿದ್ದು ವಿದ್ಯುತ್ ಕಂಬಗಳು ತುಂಡಾಗಿದೆ. ತೆಂಗು ಅಡಿಕೆಯ ಮರಗಳು ಭಾರಿ ಗಾಳಿಗೆ ಬಿದ್ದು ಕೃಷಿಗೂ ಅಪಾರ ನಷ್ಟ ಉಂಟಾಗಿದೆ. ಹಲವೆಡೆ ಬಾಳೆ ಸೇರಿ ಕೃಷಿಗೆ ಹಾನಿಯಾಗಿದೆ.


ಹೆಬ್ರಿ, ನಾಡ್ಪಾಲು ಮತ್ತು ಅಜೆಕಾರು ಪರಿಸರದಲ್ಲಿ ಹೆಚ್ಚು ಮರಗಳು ಬಿದ್ದು ಅತೀ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ಶಿವಪುರ, ಖಜಾನೆ, ಬೇಳಂಜೆ, ಮುದ್ರಾಡಿ, ಶಿರ್ಲಾಲು, ಕಾಡುಹೊಳೆ ಸೇರಿದಂತೆ ಹಲವೆಡೆ ಅಪಾರ ಹಾನಿ ಉಂಟಾಗಿದೆ. ಮೆಸ್ಕಾಂ ಹೆಬ್ರಿ ಉಪವಿಭಾಗದ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ವಿದ್ಯುತ್ ಸರಬರಾಜು ಕಂಬಗಳು ತುಂಡಾಗಿ ಮಂಗಳವಾರ ರಾತ್ರಿಯಿಂದಲೇ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.


ಮೆಸ್ಕಾಂ ಗೆ 40 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ. ಮೆಸ್ಕಾಂ ಎಇಇ ನಾಗರಾಜ್, ಜೆಇಗಳಾದ ಲಕ್ಷ್ಮೀಶ್ ಮತ್ತು ಸಂದೀಪ್ ನೇತ್ರತ್ವದಲ್ಲಿ ಹಾನಿಯಾದ ವಿದ್ಯುತ್ ಲೈನ್ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ. ಮೆಸ್ಕಾಂ, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ರಿ ತಾಲ್ಲೂಕು ಕಚೇರಿಯ ಬಳಿ ಮರ ವಿದ್ಯುತ್ ಲೈನ್ ಮೇಲೆ ಬಿದ್ದು ಹಾನಿಯಾಗಿದೆ. ಅಜೆಕಾರು ಗುಡ್ಡೆಯಂಗಡಿಯ ಬಸ್ ನಿಲ್ದಾಣದ ಹೆಂಚು ಗಾಳಿಗೆ ಹಾರಿ ಹೋಗಿವೆ.
