ಹೆಬ್ರಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಾಡಿನ ಜನರ ಬದುಕು ಸ್ವಾವಲಂಭಿಯಾಗಿದೆ, ಬದುಕು ಹಸನಾಗಿದೆ. ಜನಜೀವನಕ್ಕೆ ಎಲ್ಲಾ ಅವಶ್ಯಕತೆಯ ಜೊತೆಗೆ ನಮ್ಮೂರಿನ ಕೆರೆಗಳು ಅತೀ ಪ್ರಾಮುಖ್ಯವಾಗಿದೆ. ಈ ತನಕ ರಾಜ್ಯದಾದ್ಯಂತ ಮುಚ್ಚಿ ಹೋಗಿರುವ 954 ಕೆರೆಗಳನ್ನು ಸ್ಥಳೀಯ ಸಂಘಸಂಸ್ಥೆಗಳು, ದಾನಿಗಳ ಸಹಕಾರದಲ್ಲಿ ಪುನಶ್ಚೇತನಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುತ್ತಿರುವುದು ಅದ್ಭುತ ಕಾರ್ಯ. ಗ್ರಾಮ ಪಂಚಾಯಿತಿಗಳು ಸಮಿತಿಯನ್ನು ರಚಿಸಿ ಅತ್ಯುತ್ತಮವಾಗಿ ಕೆರೆಯನ್ನು ನಿರ್ವಹಣೆ ಮಾಡಬೇಕು ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.

ಅವರು ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲ್ಲೂಕು, ಮುದ್ರಾಡಿ ಗ್ರಾಮ ಪಂಚಾಯಿತಿ, ಮುದ್ರಾಡಿ ಮೇಲ್ಬೇಟ್ಟು ಮದಗ ಕೆರೆ ಅಭಿವೃದ್ಧಿ ಸಮಿತಿಯ ಸಹಕಾರದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಪುನಶ್ಚೇತನಗೊಳಿಸಿದ 954ನೇ ನಮ್ಮೂರು ನಮ್ಮ ಕೆರೆಯನ್ನು ಮೇಲ್ಬೇಟ್ಟು ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ರಾಜ್ಯದ ಶ್ರೀ ನಾರಾಯಾಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ೯೫೪ನೇ ನಮ್ಮೂರು ನಮ್ಮ ಕೆರೆಯನ್ನು ಮುದ್ರಾಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರು.

ಮುದ್ರಾಡಿ ಮೇಲ್ಬೇಟ್ಟು ಮದಗ ಕೆರೆಯನ್ನು ಪುನಶ್ಚೇತನಗೊಳಿಸಲು ಮುತುವರ್ಜಿ ವಹಿಸಿದ ಯೋಜನೆಯ ಕೃಷಿ ವಿಭಾಗದ ಮೇಲ್ವೀಚಾರಕ ಉಮೇಶ್ ಬಿಕೆ, ಯಂತ್ರದ ಕೆಲಸ ನಿರ್ವಹಿಸಿದ ತಿಪ್ಪೇಶ್, ಹೆಬ್ರಿ ತಾಲ್ಲೂಕಿನ ನೂತನ ಯೋಜನಾಧಿಕಾರಿ ರೇಷ್ಮಾ ಎಸ್, ಕೆರೆ ಪುನಶ್ಚೇತನಕ್ಕೆ ಶ್ರಮಿಸಿದ ಹಲವರನ್ನು ಗೌರವಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಜಲ ಸಂಪತ್ತು ವೃದ್ಧಿಸುವ ಮಹತ್ವದ ಕಾರ್ಯವನ್ನು ಧರ್ಮಸ್ಥಳ ಯೋಜನೆಯು ಮಾಡುತ್ತಿದೆ ಎಂದರು. ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ನಮ್ಮೂರು ನಮ್ಮ ಕೆರೆ ಯೋಜನೆಯ ಮಾಹಿತಿ ನೀಡಿದರು.

ಮುದ್ರಾಡಿ ಮೇಲ್ಬೇಟ್ಟು ಮದಗ ಕೆರೆ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಗಣಪತಿ ಮುದ್ರಾಡಿ, ಅಧ್ಯಕ್ಷ ಸುಧಾಕರ ಶೆಟ್ಟಿ, ಯೋಜನೆಯ ವಿವಿಧ ಘಟಕಗಳ ಪದಾಧಿಕಾರಿಗಳಾದ ಹೆಬ್ರಿ ವಾದಿರಾಜ ಶೆಟ್ಟಿ, ವಿಠ್ಠಲ ಶೆಟ್ಟಿ ಸೀತಾನದಿ, ರತ್ನಾಕರ ಪೂಜಾರಿ ಮಾತಿಬೆಟ್ಟು, ಯೋಗೀಶ್, ಮುದ್ರಾಡಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮಿಥುನ್, ಪಿಡಿಒ ಸುಭಾಸ್ ಖಾರ್ವಿ, ಮೇಲ್ವೀಚಾರಕ ಉಮೇಶ್, ಸೇವಾಪ್ರತಿನಿಧಿಗಳಾದ ಮಮತಾ, ಸುಜಯಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಘಟಕಗಳ ಪ್ರಮುಖರು, ಮುಖಂಡರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ರಚಿತಾ ನಿರೂಪಿಸಿ ಉಮೇಶ್ ಬಿಕೆ. ವಂದಿಸಿ ರೇಷ್ಮಾ ಎಸ್ ಸ್ವಾಗತಿಸಿದರು.
