ಉಡುಪಿ – ಪಳ್ಳಿ – ಕಣಂಜಾರು – ಕಾರ್ಕಳ ಮಾರ್ಗವಾಗಿ ಚಲಿಸುವ ಖಾಸಗಿ ಬಸ್ಸಿನಲ್ಲಿ ಇಲಾಖೆಯ ದರಪಟ್ಟಿಗಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಖಾಸಗಿ ಬಸ್ಸಿನ ದರಪಟ್ಟಿಯನ್ನು ಪರಿಶೀಲಿಸುವಂತೆ ನೀರೆ ಗ್ರಾ.ಪಂ. ಮಾಜಿ ಅಧ್ಯಕ್ಷರ ಮುಂದಾಳತ್ವದಲ್ಲಿ ಗ್ರಾಮಸ್ಥರು ಸೇರಿ ಆರ್ಟಿಓ ಕಛೇರಿಗೆ ಮನವಿ ಸಲ್ಲಿಸಿದ್ದಾರೆ.
ಈಗಾಗಲೇ ಬಸ್ ಮಾಲಕರ ಸಂಘವು ಡೀಸೆಲ್ ಹಾಗೂ ಬಸ್ಸಿನ ಬಿಡಿ ಭಾಗಗಳ ದರವು ಹೆಚ್ಚಾದುದರಿಂದ ಟಿಕೆಟ್ ದರವನ್ನು ಏರಿಸುವುದಾಗಿ ತಿಳಿಸಿದ್ದರು. ಅದರಂತೆ ಬಸ್ಸಿನ ಟಿಕೆಟ್ ದರವು ಏರಲ್ಪಟ್ಟಿದೆ. ಆದರೆ ದರಪಟ್ಟಿಗಿಂತಲೂ ಹೆಚ್ಚು ಹಣವನ್ನು ಖಾಸಗಿ ಬಸ್ಸಿನ ನಿರ್ವಾಹಕರು ವಸೂಲಿ ಮಾಡುತ್ತಿದ್ದು, ಶಾಲಾ ಮಕ್ಕಳಿಗೆ, ದಿನನಿತ್ಯ ಪ್ರಯಾಣಿಕರಿಗೆ, ಕೂಲಿ ಕಾರ್ಮಿಕರಿಗೆ ಆರ್ಥಿಕ ಹೊರೆಯನ್ನುಂಟುಮಾಡುತ್ತಿದ್ದು, ಈ ಬಗ್ಗೆ ಆರ್ಟಿಓ ಇಲಾಖೆ ಪರಿಶೀಲನೆ ನಡೆಸಿ ಪಡೆದುಕೊಳ್ಳುತ್ತಿರುವ ದುಪ್ಪಟ್ಟು ಟಿಕೆಟ್ ದರವನ್ನು ತಡೆಹಿಡಿಯುವಂತೆ ಆರ್ಟಿಓ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಿಲೋ ಮೀಟರ್ಗೆ ತಕ್ಕಂತೆ ದರವನ್ನು ನಿಗಧಿ ಪಡಿಸಿದ್ದರೂ ಇದಕ್ಕಿಂತ ಹೆಚ್ಚುವರಿಯಾಗಿ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ನಿರ್ವಾಹಕರು ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
