ಮೊಬೈಲ್ಗೆ ಎಪಿಕೆ ಫೈಲ್ ಬಂದಲ್ಲಿ ಜಾಗೃತಿ ವಹಿಸಿ:ಪಿಎಸ್ಐ ಪ್ರಸನ್ನ
ಕಾರ್ಕಳ: ಸೈಬರ್ ಅಪರಾಧಿಗಳು ಎಪಿಕೆ ಫೈಲ್ಗಳನ್ನು ಮೊಬೈಲ್ಗೆ ಕಳುಹಿಸುವ ಮೂಲಕ ಖಾತೆಯ ಹಣವನ್ನು ಎಗರಿಸುವ ಕೆಲಸ ಮಾಡುತ್ತಾರೆ ಆದ್ದರಿಂದ ತಮ್ಮ ಮೊಬೈಲಿಗೆ ಎಪಿಕೆ ಫೈಲ್ ಬಂದಲ್ಲಿಅದನ್ನು ತೆರೆಯದೆ ಡಿಲೀಟ್ ಮಾಡಿ ಸೈಬರ ವಂಚನೆಗೆ ಒಳಗಾಗದೆ ಜಾಗೃತಿ ವಹಿಸುವಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಸನ್ನ ಕುಮಾರ್ಹೇಳಿದರು.
ಜು. ೨೫ ರಂದು ಪತ್ರಿಕಾ ಭವನದಲ್ಲಿ ನಡೆದ ಪೊಲೀಸ್ ಇಲಾಖೆಯ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾಹಿತಿ ನೀಡಿದರು
ಅನುಮಾನಾಸ್ಪದ ಲಿಂಕ್ಗಳು, ಮೊಬೈಲ್ ಅಪ್ಲಿಕೇಷನ್ಗಳು ಬಂದಲ್ಲಿ ಯಾವುದೇ ಕಾರಣಕ್ಕೂ ಡೌನ್ಲೋಡ್ ಮಾಡಬಾರದು. ಇದರಿಂದ ಸೈಬರ್ ವಂಚನೆಯಿಂದ ತಪ್ಪಸಿಕೊಳ್ಳಲು ಸಾಧ್ಯ ಎಂದರು.
ಹಿಂದೆ ಸೈಬರ್ ಅಪರಾಧ ಪ್ರಕರಣಗಳು ಅತೀ ಹೆಚ್ಚು ನಡೆಯುತ್ತಿತ್ತು. ಆದರೆ ಇತ್ತಿಚಿನ ದಿನಗಳಲ್ಲಿ ಕಡಿಮೆಯಾಗಿದೆ. ಸೈಬರ್ ವಂಚನೆ ಪ್ರಕರಣಗಳಲ್ಲಿ ಸುಮಾರು ಶೇ.೮೦ರಷ್ಟು ಪತ್ತೆ ಕಾರ್ಯ ನಡೆಸಲಾಗಿದೆ ಎಂದರು. ಸೈಬರ್ ವಂಚನೆಗೆ ಒಳಗಾದಲ್ಲಿ ಕೂಡಲೇ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸುವಂತೆ ಅವರು ತಿಳಿಸಿದರು.
ಪತ್ರಿಕೆಗಳಲ್ಲಿ ಪ್ರಕಟವಾಗುವಾಗುವ ವರದಿಗಳು ಕಾನೂನಾತ್ಮಕವಾಗಿರಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿ ಅಥವಾ ಮಾಹಿತಿಯನ್ನು ಅದರ ಸತ್ಯಾಸತ್ಯತೆ ಪರಿಶೀಲಿಸದೆ ಹಂಚಿಕೊಳ್ಳಬಾರದು. ಧಾರ್ಮಿಕ,ಭಾಷಾ ಭಾವನೆಗಳಿಗೆ, ಆಧಾರ ರಹಿತ, ಸುಳ್ಳು ಸುದ್ದಿ, ವ್ಯಕ್ತಿಯ ತೇಜೋವಧೆ ಮಾಡುವ ಅಥವಾ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ರೀತಿಯ ಪೋಸ್ಟ್ಗಳು ಮತ್ತು ಸಂದೇಶಗಳನ್ನು ಪ್ರಸಾರ ಮಾಡಿದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪೋಕ್ಸೊ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೆಸರು, ವಿಳಾಸ, ಛಾಯಾಚಿತ್ರ ಅಥವಾ ಗುರುತು ಪತ್ತೆಯಾಗುವ ಯಾವುದೇ ಮಾಹಿತಿಯನ್ನು ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಲಯಗಳು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿವೆ. ಈ ಬಗ್ಗೆ ಮಾಧ್ಯಮಗಳು ಹಾಗೂ ಸಾರ್ವಜನಿಕರು ತಿಳಿದುಕೊಳ್ಳಬೇಕಾಗಿದೆ ಎಂದರು.
ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಮೂಡುಬಿದಿರೆ ಕಾರ್ಯರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಹೆಬ್ರಿ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಸುಕುಮಾರ್, ಜಿಲ್ಲಾ ಉಪಾಧ್ಯಕ್ಷ ಉದಯ ಮುಂಡ್ಕೂರು, ಹರೀಶ್ ಸಚ್ಚರಿಪೇಟೆ, ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
