ಸಹಸ್ರಾರು ಜನರಿಗೆ ಶಿಕ್ಷಣ ಬೋಧಿಸಿರುವ ಮಿಜಾರಿನ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನ ( ಬಂಗಬೆಟ್ಟು ಶಾಲಾ ಮೈದಾನ) ದಲ್ಲಿ ಪ್ರಾರಂಭವಾಗಿರುವ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ವಿರೋಧಿಸಿ ತೋಡಾರು- ಮಿಜಾರು ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಶಾಲೆಯ ಹೆಸರಿನಲ್ಲಿ 2.95 ಎಕರೆ ಜಾಗವಿದ್ದು ಅದರಲ್ಲಿ 95 ಸೆನ್ಸ್ ಜಾಗವನ್ನು ಮಿಜಾರಿನ ಸರಕಾರಿ ಹೈಸ್ಕೂಲ್, ಪದವಿಪೂರ್ವ ಕಾಲೇಜು ಆಗುವಾಗ ಬಿಟ್ಟುಕೊಡಲಾಗಿತ್ತು. ಉಳಿದ ಎರಡು ಎಕರೆ ಜಾಗದಲ್ಲಿ ಆಟದ ಬಯಲು ಇದೆ. ಈಗ ಮಿಜಾರು ಕೆ.ಪಿ.ಎಸ್.ಶಾಲೆಯೆಂದು ಬದಲಾಗಿರುವುದರಿಂದ ಮತ್ತೆ ನಾಲ್ಕು ಕೊಠಡಿಗಳು ಮಂಜೂರಾಗಿದೆ. ಆ ಕೊಠಡಿಗಳನ್ನು ಆಟದ ಬಯಲಿನಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈ ಕೊಠಡಿಗಳ ಬೇರೆ ಕಡೆ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಹೊಸಕೊಠಡಿಗಳ ಗುದ್ದಲಿಪೂಜೆ ಆದ ಸಂದರ್ಭದಲ್ಲೂ ಗ್ರಾಮಸ್ಥರು ಪ್ರತಿಭಟಿಸಿ ಪತ್ರಿಕಾಗೋಷ್ಠಿ ಮಾಡಿ ವಿರೋಧ ವ್ಯಕ್ತಪಡಿಸಿದ್ದರು.
ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಮ್ಮ ಮನವಿ ಸಲ್ಲಿಸಿದ್ದ ಗ್ರಾಮಸ್ಥರು ಇಂದು ಮತ್ತೊಮ್ಮೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ತಾ.ಪಂ.ಮಾಜಿ ಸದಸ್ಯ ಎಂ.ಜಿ.ಮುಹಮ್ಮದ್, ಗ್ರಾ.ಪಂ.ಮಾಜಿ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಎಂ.ಎ.ಅಶ್ರಫ್, ಪ್ರಮುಖರಾದ ಹಫೀಝ್ ತೋಡಾರ್, ಇಸ್ಮಾಯಿಲ್, ರಿಝ್ವಾನ್ ಮತ್ತಿತರರು ಇದ್ದರು.
