ಕಾರ್ಕಳ: ಬೆಂಗಳೂರಿನ ಕಿತ್ತೂರು ರಾಣಿ ಚೆನ್ನಮ್ಮ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಭಾಂದವ ಕಪ್ 2026, ಪ್ರಾಥಮಿಕ ವಿಭಾಗದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ನಮ್ಮ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 36 ಪ್ರಾಥಮಿಕ ಶಾಲಾ ತಂಡಗಳು ಈ ಪ್ರತಿಷ್ಠಿತ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಅತ್ಯಂತ ಸ್ಪರ್ಧಾತ್ಮಕವಾಗಿದ್ದ ಈ ಪಂದ್ಯಾಟದಲ್ಲಿ ನಮ್ಮ ಶಾಲೆಯ ಬಾಲಕಿಯರು ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಈ ಬಹುಮಾನವನ್ನು ಕರ್ನಾಟಕ ಸರ್ಕಾರ ಮಾಜಿ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿರವರು ವಿತರಿಸಿದರು. ವಿಜೇತ ವಿದ್ಯಾರ್ಥಿಗಳಾದ ಏಳನೇ ತರಗತಿಯ ತ್ರಿಷ್ಮ ಎಸ್, ಸೃಷ್ಠಿ, ಪ್ರಾನ್ವಿ ಎಸ್ ದೇವಾಡಿಗ, ಕೇಟ್ಲಿನ್ ಏಂಜಲ್ ಪಿಂಟೊ, ಎಲ್ಸಾ ರುಬೇಲ್ ಡಿಸೋಜಾ ಮತ್ತು ಆರನೇ ತರಗತಿಯ ನಿಶಾ ಡಿ ಸೋಜಾ ಹಾಗೂ ಅಲಿಷಾ ಡಿಸೋಜಾ ತಂಡದಲ್ಲಿ ಸ್ಥಾನ ಪಡೆದಿದ್ದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್ ತಂಡವನ್ನು ಮುನ್ನಡೆಸಿದರು. ತಂಡದ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಕ್ರೀಡಾ ತರಬೇತುದಾರರು ಅಭಿನಂದನೆ ಸಲ್ಲಿಸಿದ್ದಾರೆ. ಈ ಗೆಲುವು ಸಂಸ್ಥೆಯ ಕ್ರೀಡಾ ಪರಂಪರೆಗೆ ಮತ್ತೊಂದು ಮೈಲಿಗಲ್ಲಾಗಿದೆ.
