ಮೂಡುಬಿದಿರೆಯ ಜೈನ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಾಗಿ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮವು ನಡೆಯಿತು.

ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾಗಿರುವ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡುತ್ತಾ ಮಾದಕ ವಸ್ತುಗಳ ಜಗತ್ತು ಬಹಳ ದೊಡ್ಡದು. ವಿಶ್ವದಲ್ಲೇ ಅತ್ಯಧಿಕ ಯುವಜನರನ್ನು ಹೊಂದಿದ ರಾಷ್ಟ್ರ ನಮ್ಮ ದೇಶ ಭಾರತ. ಯುವಜನರನ್ನು ಮಾದಕ ವಸ್ತುವಿನ ಜಾಲದಲ್ಲಿ ಸಿಲುಕಿಸಿ ದೇಶದ ಭವಿಷ್ಯವನ್ನೇ ಹಾಳುಗೆಡಹುವ ಕುತಂತ್ರ ನಡೆಯುತ್ತಿದೆ. ಮಾದಕ ವಸ್ತುವಿನ ಜಾಲಕ್ಕೆ ಬಲಿಯಾದ ಯುವಜನತೆ ತಮ್ಮ ದೈಹಿಕ ಮಾನಸಿಕ ಸ್ವಾಸ್ಥ್ಯವನ್ನು ಹಾಳುಮಾಡಿಕೊಳ್ಳುವುದರ ಜೊತೆಗೆ ಸಮಾಜದ ರಾಷ್ಟ್ರದ ಸ್ವಾಸ್ಥ್ಯವನ್ನು ನಾಶ ಮಾಡುತ್ತಿದ್ದಾರೆ. ಮಾದಕವಸ್ತುವಿನ ಬಳಕೆ ಮೊದಲು ಕುತೂಹಲಕ್ಕಾಗಿ ಪ್ರಾರಂಭವಾಗಿ ಕೊನೆಗೆ ಅದರ ದಾಸರೇ ಆಗುತ್ತೇವೆ. ವಿದ್ಯಾರ್ಥಿ ದೆಸೆಯಲ್ಲಿಯೇ ಮಾದಕ ವಸ್ತುವಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಂಡು ಅದಕ್ಕೆ ಬಲಿಯಾಗದೆ ನಮ್ಮನ್ನು ನಾವು ರಕ್ಷಿಸಿಕೊಂಡು, ಮನೆ, ಕುಟುಂಬ, ಸಮಾಜ, ರಾಷ್ಟ್ರವನ್ನು ಅಭ್ಯುದಯದ ಕಡೆಗೆ ಮುನ್ನಡೆಸಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜೈನ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ಕೆ. ಹೇಮರಾಜ್ ಮಾತನಾಡುತ್ತಾ ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ|| ಪ್ರಭಾತ್ ಬಲ್ನಾಡು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಭಾಷಾ ಉಪನ್ಯಾಸಕರಾದ ಉದಯ ಕುಮಾರ್ ಕೆ. ಸ್ವಾಗತಿಸಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಿಜಯಶ್ರೀ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ಚರಣ್ ಉಪಸ್ಥಿತರಿದ್ದರು.
