ಕಂಬಳ ಕೂಟ ನಡೆಯುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್ ಮ್ಯಾಚ್ ಮಾದರಿಯಲ್ಲಿ ಕಂಬಳ ಕೋಣಗಳ ಓಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಲೈವ್ ಸ್ಕೋರ್ ಬೋರ್ಡ್ ಇನ್ನು ವೀಕ್ಷಕರಿಗೆ ಲಭ್ಯವಾಗಲಿದೆ.
ಲೈವ್ ಸ್ಕೋರ್ ಬೋರ್ಡ್ ತಯಾರಿಸಿ ಅದನ್ನು ಪ್ರದರ್ಶಿಸಿ ಮಾಹಿತಿ ನೀಡುವ ನಿಟ್ಟಿನಲ್ಲಿ ಹೊಸ ಪ್ರಯತ್ನವನ್ನು ನಮ್ಮ ಕುಡ್ಲ ವಾಹಿನಿ ಮುಂದಿಟ್ಟಿದ್ದು, ಆಗಸ್ಟ್ 18ರಂದು ನಡೆದ ನಮ್ಮ ಕಂಬಳ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಇದರ ಪರಿಕಲ್ಪನೆ ಅನಾವರಣ ಮಾಡಲಾಯಿತು.
ಕಂಬಳ ಕೋಣದ ಯಜಮಾನರು, ಓಟಗಾರರು, ಓಡಿದ ಕೋಣಗಳ ಹೆಸರು, ಸ್ಪರ್ಧೆಯಲ್ಲಿ ಕೋಣಗಳು ಗೆದ್ದ ಅವಧಿ ಇತ್ಯಾದಿ ವಿಚಾರಗಳನ್ನು ಹೊಂದಿರುವ ಸಾಫ್ಟ್ವೇರ್ ಅಪ್ಡೇಟ್ ಮಾಡಲಾಗುತ್ತಿದ್ದು, ಇದರ ರೂವಾರಿ ಆದಿತ್ಯ ಕರ್ಕೇರ ಅವರ ಕಲ್ಪನೆಯನ್ನು ಸೇರಿದ ಕಂಬಳ ಸಂಘಟಕರು, ಅಭಿಮಾನಿಗಳು ಕೈಚಪ್ಪಾಳೆ ಬಡಿಯುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮೂಲ್ಕಿ ಸೀಮೆ ಅರಸು ಕಂಬಳದ ದುಗ್ಗಣ್ಣ ಸಾವಂತ ಅರಸರು, ಸಂಸತ್ ಸದಸ್ಯ ಮತ್ತು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬೃಜೇಶ್ ಚೌಟ, ಮಾಜಿ ಸಚಿವರಾದ ಬಿ ರಮಾನಾಥ ರೈ ಮತ್ತು ಕೃಷ್ಣ ಜೆ.ಪಾಲೆಮಾರ್, ಕಂಬಳ ಅಕಾಡೆಮಿ ಸಂಸ್ಥಾಪಕ ಪ್ರೊ. ಗುಣಪಾಲ ಕಡಂಬ, ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಬಾವ ಹರೀಶ್ ಶೆಟ್ಟಿ, ಕಂಬಳ ಸಂಘಟಕ ಹಾಗೂ ಕೋಣಗಳ ಮಾಲಕ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ನಮ್ಮಕುಡ್ಲ ನಿರ್ದೇಶಕರಾದ ಲೀಲಾಕ್ಷ ಬಿ. ಕರ್ಕೇರ, ಹರೀಶ್ ಬಿ ಕರ್ಕೇರ, ಸುರೇಶ್ ಬಿ ಕರ್ಕೇರ, ಮೋಹನ್ ಬಿ ಕರ್ಕೇರ, ಸಂತೋಷ ಬಿ ಕರ್ಕೇರ, ಮ್ಯಾನೇಜರ್ ಸುದರ್ಶನ್ ಕೋಟ್ಯಾನ್ , ರಾಜೀವ್ ಶೆಟ್ಟಿ ಯಡ್ತೂರು, ನಮ್ಮಕುಡ್ಲವಾಹಿನಿಯ ಸಿಒಒ ಕದ್ರಿ ನವನೀತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
