ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ( ಪದವಿ ಪೂರ್ವ ಶಿಕ್ಷಣ ಇಲಾಖೆ ) ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇದರ ವತಿಯಿಂದ “ಜೀವವಿರೋಧಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ : ಲಿಂಗ ಸಮಾನತೆ ಸಾಧಿಸಿ” ಎಂಬ ಶೀರ್ಷಿಕೆಯಡಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲೆ ವಿಭಾಗ, ಬಜಗೋಳಿಯಲ್ಲಿ ಅಕ್ಟೋಬರ್ 2 ರಿಂದ 8ರವರೆಗೆ ನಡೆಯುವ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರವು ಜ್ಯೋತಿ ಪ್ರಜ್ವಲನದ ಮೂಲಕ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.
ರಾಜ್ಯ ಕ್ರಷರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರು, ಉದ್ಯಮಿಗಳಾದ ಡಾ. ರವೀಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ವ್ಯಕ್ತಿತ್ವವನ್ನು ಅರಳಿಸುವ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕೇವಲ ನಮಗಾಗಿ ಬದುಕದೆ ಇತರರಿಗಾಗಿ, ಸಮಾಜ ಕಾರ್ಯಕ್ಕಾಗಿ ಜೀವನವನ್ನು ಮೀಸಲಿಡಬೇಕು. ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ನಾಗರಿಕ ಜವಾಬ್ದಾರಿಯ ಪ್ರಜ್ಞೆ ಬೆಳೆಸುತ್ತದೆ ಎಂದು ನುಡಿದರು.
ದಿಕ್ಸೂಚಿ ಭಾಷಣಗೈದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಬಿ ಗಣನಾಥ ಶೆಟ್ಟಿ ಸ್ವಾಗತಿಸಿ, ಶಿಬಿರದ ಉದ್ದೇಶ ಮತ್ತು ಶಿಬಿರದಲ್ಲಿ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳ ವಿವರವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಭಾಗದ ಪ್ರಾಂತೀಯ ವಿಭಾಗಾಧಿಕಾರಿಯಾದ ಶ್ರೀಮತಿ ಸವಿತಾ ಎರ್ಮಾಳ್ ಮಾತನಾಡಿ ’ಜೀವ ವಿರೋಧಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ : ಲಿಂಗ ಸಮಾನತೆ ಸಾಧಿಸಿ’ ಶೀರ್ಷಿಕೆಯನ್ನು ಶಿಬಿರಾರ್ಥಿಗಳಿಗೆ ತಿಳಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಭಾಸ್ಕರ್ ಎಸ್ ಪೂಜಾರಿಮಾತನಾಡಿ ಕ್ರಿಯೇಟಿವ್ ಕಾಲೇಜಿನ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಬಜಗೋಳಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸಿಕೊಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಶಿಬಿರದ ಎಲ್ಲಾ ದಿನಗಳಲ್ಲಿಯೂ ಶಾಲಾ ಎಸ್ಡಿಎಂಸಿ ಸದಸ್ಯರು ಜೊತೆಯಾಗಲಿದ್ದಾರೆ ಎಂದರು.
ಗೌರವ ಉಪಸ್ಥಿತರಾದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ’ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ವಿದ್ಯಾರ್ಥಿಗಳೇ ಸಮಾಜದ ಭದ್ರ ಬುನಾದಿಯಾಗಬೇಕು. ಎನ್ ಎಸ್ ಎಸ್ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಅರಳಿಸುವುದರ ಜೊತೆಗೆ ಚಾರಿತ್ರ್ಯ ಬೆಳೆಸುತ್ತದೆ ಎಂದರು. ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀದೇವಿ ಕ್ಯಾಶ್ಯೂ ಇಂಡಸ್ಟ್ರೀಸ್, ಮುಡ್ರಾಳು ಬಜಗೋಳಿಯ ಮಾಲಕರಾದ ಗಣೇಶ್ ಕಾಮತ್, ಮಿಯ್ಯಾರು ಕಾಜರಬೈಲ್ ಸ್ಟೋನ್ ಡಿಸೈನರ್ ಉದ್ಯಮಿ ಮಹಮ್ಮದ್ ಗೌಸ್, ಮಿಯ್ಯಾರು ಉದ್ಯಮಿ ಜೆರಾಲ್ಡ್ ಡಿ ಸಿಲ್ವಾ, ಸರಕಾರಿ ಪದವಿ ಪೂರ್ವ ಕಾಲೇಜು, ಬಜಗೋಳಿ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಭಟ್, ಬಜಗೋಳಿ. ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲಾ ವಿಭಾಗದ ( ಹಿರಿಯ ಶಿಕ್ಷಕರು)ಬಸವರಾಜ ತಾವರಗಿ, ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸಂಯೋಜನಾಧಿಕಾರಿ ಉಮೇಶ್ ಕಾರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದದವರು, ಎನ್ ಎಸ್ ಎಸ್ ಶಿಬಿರಾರ್ಥಿಗಳು, ಬಜಗೋಳಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್ ಕೆ ರವರು ನಿರೂಪಿಸಿ, ಶಿಬಿರಾಧಿಕಾರಿಗಳಾದ ಉಮೇಶ್ ರವರು ವಂದನಾರ್ಪಣೆಗೈದರು.