ಸೇಂಟ್ ಲಾರೆನ್ಸ್ ಬಸಿಲಿಕಾ, ಅತ್ತೂರಿನಲ್ಲಿ ಕ್ರಿಸ್ಮಸ್ ಹಬ್ಬವನ್ನು ಡಿ. 24 ರಂದು ಆಚರಿಸಲಾಯಿತು. ಅತ್ತೂರು ಗಾಯನ ಮಂಡಳಿಯವರ ಕ್ರಿಸ್ಮಸ್ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಉಡುಪಿ ಧರ್ಮಪ್ರಾಂತ್ಯದ ಧರ್ಮಶಿಕ್ಷಣ ನಿರ್ದೇಶಕರಾದ ವಂದನಿಯ ಫಾ. ಜಿತೇಶ್ ಕ್ಯಾಸ್ಟೆಲಿನೋ ಪವಿತ್ರ ಬಲಿಪೂಜೆ ನೆರವೇರಿಸಿ ಕ್ರಿಸ್ಮಸ್ನ ನಿಜವಾದ ಅರ್ಥವನ್ನು ವಿವರಿಸಿದರು. ಬಡವರ ಹಾಗೂ ಅಗತ್ಯವಿರುವವರ ಮೇಲಿನ ಪ್ರೀತಿಯನ್ನು ಮತ್ತು ಸಮಾಜದಲ್ಲಿ ಕ್ರಿಸ್ತನ ಕರುಣೆಯ ಜೀವಂತ ಸಾಕ್ಷಿಗಳಾಗಲು ವಿಶ್ವಾಸಿಗಳನ್ನು ಆಹ್ವಾನಿಸಿದರು.

ಧರ್ಮಗುರುಗಳಾದ ಅತೀ ವಂದನಿಯ ಫಾ. ಅಲ್ಬನ್ ಡಿಸೋಜಾ, ವಂದನಿಯ ಫಾ. ರೊಬಿನ್ ಸಾಂತುಮಾಯೆರ್, ವಂದನಿಯ ಫಾ. ರೋಮನ್ ಮಸ್ಕರೇನ್ಹಾಸ್ ಹಾಗೂ ವಂದನಿಯ ಫಾ. ಆಂಟನಿ ವಾಜ್ ಉಪಸ್ಥಿತರಿದ್ದರು.

ಪವಿತ್ರ ಬಲಿ ಅರ್ಪಣೆಯ ಸಮಯದಲ್ಲಿ2026ನೇ ಸಾಲಿನ ಐಸಿವೈಎಂ ಸಂಘಟನೆಯ ನೂತನ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿ, ಪಾರಿಷ್ ಹಾಗೂ ಯುವಜನ ಸೇವೆಗೆ ನಿಷ್ಠೆಯಿಂದ ಸೇವೆ ಸಲ್ಲಿಸುವುದಾಗಿ ಬದ್ಧತೆ ವ್ಯಕ್ತಪಡಿಸಿದರು.
ಪವಿತ್ರ ಬಲಿಯ ನಂತರ ವೈಸಿಎಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
