ಹೆಬ್ರಿ : ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಹೆಬ್ರಿ ತಾಲೂಕು ಇದರ ವತಿಯಿಂದ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವು ಹೆಬ್ರಿ ಚೈತನ್ಯ ಯುವ ವೃಂದ ಸಭಾಂಗಣದಲ್ಲಿ ಸೆ. 28 ರಂದು ನಡೆಯಿತು.

ಉದ್ಯಮಿ ಸತೀಶ್ ಪೈ ಹೆಬ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯೋಜನೆಯ ಸದಸ್ಯರ ಮಕ್ಕಳಿಗೆ ಅವರ ಹೆಚ್ಚಿನ ವಿದ್ಯಾಭ್ಯಾಸ ಸಮಯದಲ್ಲಿ ಪ್ರೋತ್ಸಾಹಿಸಲು ಯೋಜನೆಯಿಂದ ಸುಜ್ಞಾನನಿಧಿ ಮೊತ್ತವನ್ನು ವಿದ್ಯಾಭ್ಯಾಸ ಮುಗಿಯುವರೆಗೆ ನೀಡುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ರವರು ಮಾತನಾಡಿ ಸುಜ್ಞಾನ ನಿಧಿ ಶಿಷ್ಯ ವೇತನವನ್ನು ಸಮುದಾಯದ ವಿದ್ಯಾರ್ಥಿಗಳಿಗೆ ನೀಡುವ ಯೋಜನೆಯು ಪೂಜ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರ ಸಂಕಲ್ಪದಂತೆ ಪ್ರಾರಂಭವಾಯಿತು . ಸಂಸ್ಥೆಯ 30 ಕ್ಕಿಂತಲೂ ಹೆಚ್ಚಿನ ಯೋಜನೆಗಳಲ್ಲಿ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ನೀಡುವ ಕಾರ್ಯಕ್ರಮವೂ ಒಂದಾಗಿದೆ. ಆರ್ಥಿಕವಾಗಿ ಹಿಂದುಳಿದ ಯೋಜನೆಯ ಸದಸ್ಯರ ಮಕ್ಕಳಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು ನೀಡಲಾಗುತ್ತಿದೆ.ರಾಜ್ಯದಲ್ಲಿ 97 ಸಾವಿರ ವಿದ್ಯಾರ್ಥಿಗಳಿಗೆ, ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ೭೫೦೦ ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಷ್ಯವೇತನ ದೊರಕಿದೆ.ಒಟ್ಟು 114 ಕೋಟಿ ಮೊತ್ತ ಶಿಷ್ಯ ವೇತನಕ್ಕಾಗಿ ವಿನಿಯೋಗವಾಗಿದೆ. ಉತ್ತಮ ಶಿಕ್ಷಣ ಪಡೆಯುವಲ್ಲಿ ಸಹಕಾರಿಯಾದ ಶಿಷ್ಯವೇತನದ ಪ್ರಯೋಜನವನ್ನು ಅರ್ಹ ವಿದ್ಯಾರ್ಥಿಗಳು ಸಮರ್ಪಕವಾಗಿ ಪಡಕೊಳ್ಳಬೇಕೆಂದರು.

ಉಡುಪಿ ಜಿಲ್ಲಾ ಶ್ರೀ. ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ ನಿರ್ದೇಶಕರಾದ ನಾಗರಾಜ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಹೆಬ್ರಿ ಆರಕ್ಷಕ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಹೇಶ್ ಟಿ.ಎಮ್. ಹೆಬ್ರಿ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಚಾರ ವಲಯ ಜನ ಜಾಗೃತಿ ವಲಯಾಧ್ಯಕ್ಷರಾದ ವಾದಿರಾಜ ಶೆಟ್ಟಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ್ ಬಂಗೇರ ವಹಿಸಿ ಶುಭಹಾರೈಸಿದರು.

ಹೆಬ್ರಿ ವಲಯ ಜನ ಜಾಗೃತಿ ವಲಯಾಧ್ಯಕ್ಷರಾದ ನರೇಂದ್ರ ನಾಯಕ್, ಯೋಜನೆಯ ಪ್ರವೀಣ್ ಹೆಗ್ಡೆ, ಶಾಲಿನಿ ಭಂಡಾರಿ ಉಪಸ್ಥಿತರಿದ್ದರು. ಹೆಬ್ರಿ ವಲಯ ಯೋಜನಾಧಿಕಾರಿ ಲೀಲಾವತಿ ಸ್ವಾಗತಿಸಿದರು.ವಲಯ ಮೇಲ್ವಿಚಾರಕರಾದ ಉದಯ ನಿರೂಪಿಸಿ ವಂದಿಸಿದರು.

ವಿದ್ಯಾರ್ಥಿಗಳ ಪೋಷಕರು, ಸೇವಾನಿರತರು, ಕೃಷಿ ಅಧಿಕಾರಿ ಉಮೇಶ್, ಚೈತನ್ಯ ಯುವ ವೃಂದದ ಗೌರವ ಅಧ್ಯಕ್ಷರಾದ ಎಚ್. ಜನಾರ್ಧನ್ ಮೊದಲಾದವರು ಹಾಜರಿದ್ದರು.
