ಶಿವಪುರ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲ್ಲೂಕು ಘಟಕದ ವತಿಯಿಂದ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿಯಲ್ಲಿ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ 2025 – ರೂವಾರಿ ಗಂಧಶಾಲಿಯ ಹೊಂಬೆಳಕು ಜಯಲಕ್ಷ್ಮೀ ಅಭಯ ಕುಮಾರ್ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು ಶಿವಪುರದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನಕ್ಕೆ ೨ ಸಾವಿರಕ್ಕೂ ಹೆಚ್ಚು ಮಂದಿ ಸಾಕ್ಷಿಯಾಗುವರು. ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಮೆರವಣಿಗೆ ಸೇರಿ ಎಲ್ಲವೂ ವಿಶೇಷವಾಗಿ ನಡೆಯಲಿದೆ, ಸ್ವಾಗತ ಸಮಿತಿಯ ಜೊತೆಗೆ ಎಲ್ಲಾ ಉಪಸಮಿತಿಗಳು ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಗಣೇಶ ಹಾಂಡ ತಿಳಿಸಿದರು.
ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ ರಾಷ್ಟ್ರ ಧ್ವಜಾರೋಹಣ ಮಾಡುವರು. ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು ಪರಿಷತ್ತಿನ ಧ್ವಜಾರೋಹಣ ಮಾಡುವರು. ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿರುವರು. ಲಕ್ಷ್ಮಿನರಸಿಂಹ ದೇವಸ್ಥಾನದ ವಠಾರದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಸ್ವಾಗತದ ಬಳಿಕ ಕನ್ನಡಮಾತೆ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ ನಡೆಯಲಿದೆ. ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮೆರವಣಿಗೆ ಉದ್ಘಾಟಿಸುವರು. ಶಾಸಕ ಸುನಿಲ್ ಕುಮಾರ್ ಸಮ್ಮೇಳನ ಉದ್ಘಾಟಿಸುವರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿ ಸಲ್ಲಿಸುವರು. ಮುಂಬೈ ಉದ್ಯಮಿ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸುವರು. ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರಧ್ವಾಜ್ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿ ಸಲ್ಲಿಸುವರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಶಿವಪುರ ಮುರ್ಸಾಲು ಗೋಕುಲದಾಸ ನಾಯಕ್ ಪುಸ್ತಕ ಬಿಡುಗಡೆ ಮಾಡುವರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಹಿತ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಗಣ್ಯರು, ಮುಖಂಡರು, ಸಂಘಸಂಸ್ಥೆಗಳ ಪ್ರಮುಖರು, ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಭಾಗವಹಿಸುವರು.
ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಇಲಾಖೆಯಲ್ಲಿ ಕನ್ನಡ ಗೋಷ್ಠಿ ಮತ್ತು ಕವಿಗೋಷ್ಠಿ ನಡೆಯಲಿದೆ. ಪ್ರಜಾವಾಣಿ ಪತ್ರಿಕೆಯ ನವದೆಹಲಿಯ ಮುಖ್ಯ ವರದಿಗಾರ ಶಿವಪುರ ಮಂಜುನಾಥ ಹೆಬ್ಬಾರ್ ಮತ್ತು ಹಿರಿಯ ಪತ್ರಕರ್ತೆ ಲೋಕಾಸಭೆಯ ಭಾಷಾಂತರಕಾರರಾದ ಸುಪ್ರೀತಾ ಹೆಬ್ಬಾರ್ ದಂಪತಿಗಳಿಗೆ, ಹೆಬ್ರಿಯ ಪತ್ರಕರ್ತ ನರೇಂದ್ರ ಎಸ್ ಮರಸಣಿಗೆ, ಹರಿದಾಸ ಶಿವಪುರ ಪದ್ಮನಾಭ ಗುರುದಾಸ್ ಮಂಗಳೂರು, ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಸುಗಂಧಿ ನಾಯ್ಕ್ ಶಿವಪುರ, ರಂಗ ಕಲಾವಿದ ಸತೀಶ ಆಚಾರ್ ವರಂಗ ಕ್ರೀಡಾಪಟು ಅಶ್ವಿತ್ ಅವರಿಗೆ ಅಭಿನಂದನೆ ನಡೆಯಲಿದೆ.
ಸಮಾರೋಪ ಸಮಾರಂಭ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶ್ರೀನಾಥ್ ಎಂಪಿ ಸಮಾರೋಪ ಭಾಷಣ ಮಾಡುವರು. ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು ಅಧ್ಯಕ್ಷತೆ ವಹಿಸುವರು. ಸರ್ವಾಧ್ಯಕ್ಷೆ ಜಯಲಕ್ಷ್ಮೀ ಅಭಯ ಕುಮಾರ್ ಪ್ರತಿಸ್ಪಂದನೆ ಮಾಡುವರು. ನೀಲಾವರ ಸುರೇಂದ್ರ ಅಡಿಗ ಜಿಲ್ಲಾಧ್ಯಕ್ಷರ ನುಡಿ ಸಲ್ಲಿಸುವರು. ಕನ್ನಡ ಸಾಹಿತ್ಯ ಪೋಷಕಿ ಬೆಂಬಳೂರಿನ ಸರೋಜಾ ಪುಂಡಲೀಕ ಹಾಲಂಬಿ ಸಹಿತ ವಿವಿಧ ಗಣ್ಯರು ಭಾಗವಹಿಸುವರು. ವಿವಿಧ ಕ್ಷೇತ್ರಗಳ ಸಾಧಕರಾದ ಗಿರೀಜಾ ಹೆಗ್ಡೆ ಶೇಡಿಮನೆ, ಶಂಕರ ಶೆಟ್ಟಿ ಬೇಳಂಜೆ, ಕೃಷ್ಣ ನಾಯ್ಕ್ ಬೆಳ್ವೆ, ಕೃಷ್ಣ ಹಾಂಡ ಚಾರ, ಶೀನ ಶೆಟ್ಟಿಗಾರ್ ಕೆಲಕಿಲ, ಶಂಭು ಶಿವಪುರ, ಹೆಬ್ರಿ ಗಣೇಶ್ ಕುಮಾರ್ ಭಾಗವತ, ನಾರಾಯಣ ಭಟ್ ತಿಂಗಳೆ, ಶೋಭಾ ಆರ್ ಕಲ್ಕೂರ್ ಮುದ್ರಾಡಿ ಅವರಿಗೆ ಸನ್ಮಾನ ನಡೆಯಲಿದೆ.
ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು, ಸ್ವಾಗತ ಸಮಿತಿಯ ಅಧ್ಯಕ್ಷ ಗಣೇಶ ಹಾಂಡ, ಗೌರವಾಧ್ಯಕ್ಷ ಶಂಕರನಾರಾಯಣ ಕೊಡಂಚ, ಗೌರವ ಸಲಹೆಗಾರ ಮೂರ್ಸಾಲು ಮೋಹನದಾಸ ನಾಯಕ್, ಸಂಚಾಲಕ ರಮಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ, ವಿವಿಧ ಪ್ರಮುಖರಾದ ಡಾ.ಪ್ರವೀಣ್ ಕುಮಾರ್ ಎಸ್, ನಾಯರಕೋಡು ಸಂತೋಷ ಶೆಟ್ಟಿ, ರಮೇಶ ಕುಮಾರ್ ಶಿವಪುರ ಹಾಜರಿದ್ದರು.