ಸಮಸ್ತದ ನೂರನೇ ವಾರ್ಷಿಕ ಅಂತರರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಯುಕ್ತ ಹಾಗೂ ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಅವರು ಕನ್ಯಾಕುಮಾರಿಯಿಂದ ಮಂಗಳೂರು ತನಕ ಹಮ್ಮಿಕೊಂಡಿರುವ ಶತಾಬ್ದಿ ಸಂದೇಶ ಯಾತ್ರೆಯ ಪ್ರಚಾರಾರ್ಥ ಸಮಸ್ತ ಆದರ್ಶ ಮಹಾ ಸಮ್ಮೇಳನವು ಡಿ.7 ರಂದು ಭಾನುವಾರ ಮಧ್ಯಾಹ್ನ ಎರಡು ಗಂಟೆಯಿಂದ ಮೂಡುಬಿದಿರೆಯ ಲಾಡಿಯಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಿ.ಎ.ಉಸ್ಮಾನ್ ಏರ್ ಇಂಡಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಈ ಕುರಿತು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ‘ ಆದಿನ ಮಧ್ಯಾಹ್ನ 2 ಗಂಟೆಗೆ ಮೂಡುಬಿದಿರೆ ಡೌನ್ ಟೌನ್ ಮಸೀದಿಯಿಂದ ಲಾಡಿವರೆಗೆ ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಲಿದ್ದು 3-30 ಗಂಟೆಗೆ ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ಅಬ್ದುರ್ರಹ್ಮಾನ್ ( ಅಬ್ಬುವಾಕ) ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ, ಅಸರ್ ನಮಾಝ್ ಬಳಿಕ ಬೆಳ್ತಂಗಡಿ ದಾರುಸ್ಸಲಾಮ್ ಎಜುಕೇಶನ್ ಸೆಂಟರ್ ನ ಅಧ್ಯಕ್ಷರಾದ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಅವರ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲಿದ್ ಹಾಗೂ ಶೈಖುನಾ ತೊಟ್ಟಿ ಉಸ್ತಾದ್ ಅನುಸ್ಮರಣೆ ‘ ನಡೆಯಲಿದೆ ಎಂದು ಹೇಳಿದರು.

ಮಗರಿಬ್ ನಮಾಝ್ ಬಳಿಕ ನಡೆಯಲಿರುವ ಆದರ್ಶ ಮಹಾ ಸಮ್ಮೇಳನವನ್ನು ದ.ಕ.ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ತ್ವಾಖಾ ಅಹ್ಮದ್ ಅಲ್ ಅಝಹರಿ ಉಸ್ತಾದ್ ಅವರು ಉದ್ಘಾಟಿಸಲಿದ್ದಾರೆ.
ಜಂಇಯ್ಯತುಲ್ ಮುಅಲ್ಲಿಮೀನ್ ಮೂಡುಬಿದಿರೆ ರೇಂಜ್ ಅಧ್ಯಕ್ಷರಾದ ಸಯ್ಯಿದ್ ಅಕ್ರಂ ಅಲಿ ತಂಙಳ್ ರಹ್ಮಾನಿ ಅವರು ದುವಾ ನೆರವೇರಿಸಲಿದ್ದು ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಮುಹಮ್ಮದ್ ಶರೀಫ್ ದಾರಿಮಿ ಸ್ವಾಗತಿಸಲಿದ್ದಾರೆ.
ಬಳಿಕ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿಯಾದ ಶೈಖುನಾ ಉಮರ್ ಫೈಝಿ ಮುಕ್ಕಂ ಹಾಗೂ ದಾರುರ್ರಹ್ಮಾನ್ ಎಸ್ ಎನ್ ಇ ಸಿ ಕಾಲೇಜಿನ ಪ್ರಾಂಶುಪಾಲರಾದ ಸಲಾಹುದ್ದೀನ್ ಫೈಝಿ ವಲ್ಲಪ್ಪುಝ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಉವೈಸ್ ಮದನಿ ಅಲ್ ಅಝ್ಹರಿ ತೋಕೆ ಅವರು ಕನ್ನಡ ಪ್ರಭಾಷಣ ಮಾಡಲಿದ್ದು ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಅವರು ಅನುಗ್ರಹ ಪ್ರಭಾಷಣ ಮಾಡಲಿದ್ದಾರೆ.
ಹಲವು ಮಂದಿ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಸುಮಾರು ಮೂರು ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದವರು ತಿಳಿಸಿದರು.

ಎಸ್.ಎನ್.ಇ.ಸಿ.ರಾಜ್ಯಾಧ್ಯಕ್ಷರಾದ ಸಯ್ಯಿದ್ ಅಕ್ರಂ ಅಲಿ ತಂಙಳ್, ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ಅಬ್ದುರ್ರಹ್ಮಾನ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮರೋಡಿ, ಉಪಾಧ್ಯಕ್ಷರಾದ ಅಝೀಝ್ ಮಾಲಿಕ್,ಕಾರ್ಯದರ್ಶಿ ಅಬ್ದುಲ್ ಗಫೂರ್, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಫಾಯಿಝ್ ಫೈಝಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
