
ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಭಾಗದಲ್ಲಿ ನಿರ್ಮಿಸಲಾಗಿರುವ ನೂತನ 33 ಕೆವಿ ವಿದ್ಯುತ್ ಮಾರ್ಗವು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿ ಸಾರ್ವಜನಿಕರಿಗೆ ಹಲವಾರು ಸುರಕ್ಷತಾ ಕ್ರಮಕ್ಕಾಗಿ ಸೂಚನೆಗಳನ್ನು ನೀಡಿದೆ.

ಬೆಳುವಾಯಿ ಶಾಖಾ ವ್ಯಾಪ್ತಿಯ ಹೊಸ ಉಪವಿದ್ಯುತ್ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗವು ಹಲವಾರು ಪ್ರದೇಶಗಳ ಮೂಲಕ ಹಾದು ಹೋಗುತ್ತದೆ. ಮೂಡುಬಿದಿರೆ ಉಪಕೇಂದ್ರದಿಂದ ಕಾನ, ಬನ್ನಡ್ಕ, ಸುಭಾಷ್ ನಗರ ರಸ್ತೆ ಮೂಲಕ ಕೋಟೆಬಾಗಿಲು ದ್ವಾರದವರೆಗೆ, ಕೋಟೆಬಾಗಿಲು ದ್ವಾರದಿಂದ ಹೌದಾಲ್, ಪಡುಕೊಣಾಜೆ, ಕುಕ್ಕುದಕಟ್ಟೆ ರಸ್ತೆ ಮೂಲಕ ಶಿರ್ತಾಡಿಯ ದಡ್ಡಲ್ ಪಲ್ಕೆ ಸೇತುವೆಯವರೆಗೆ, ದಡ್ಡಲ್ ಪಲ್ಕೆ ಸೇತುವೆಯಿಂದ ಶಿರ್ತಾಡಿ ಉಪಕೇಂದ್ರದವರೆಗೆ ಸಂಪರ್ಕ ನೀಡಲಾಗಿದೆ.
ಈ ಬೃಹತ್ ವಿದ್ಯುತ್ ಮಾರ್ಗವನ್ನು ಡಿಸೆಂಬರ್ 20 ಅಥವಾ ಅದರ ನಂತರದ ಯಾವುದೇ ದಿನದಂದು ಚಾಲನೆಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಮಾರ್ಗದುದ್ದಕ್ಕೂ ಹೆಚ್ಚಿನ ವೋಲ್ಟೇಜ್ ಪ್ರವಹಿಸುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.
ಸಾರ್ವಜನಿಕರಿಗೆ ಮೆಸ್ಕಾಂ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ವಿದ್ಯುತ್ ಮಾರ್ಗದ ಗೋಪುರಗಳನ್ನು (Towers) ಹತ್ತುವುದಾಗಲಿ ಅಥವಾ ಯಾವುದೇ ವಸ್ತುಗಳನ್ನು ತಗುಲಿಸುವುದಾಗಲಿ ಮಾಡಬಾರದು.
ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟುವುದು ಅಪಾಯಕಾರಿ, ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪೂರ್ವಾನುಮತಿ ಕಡ್ಡಾಯ: ಈ ಮಾರ್ಗದ ಹತ್ತಿರ ಯಾವುದೇ ನಿರ್ಮಾಣ ಅಥವಾ ಇತರೆ ಕಾಮಗಾರಿಗಳನ್ನು ಕೈಗೊಳ್ಳುವ ಮೊದಲು ಮೆಸ್ಕಾಂನಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.
ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ನಡೆದುಕೊಂಡಲ್ಲಿ ಸಂಭವಿಸುವ ಯಾವುದೇ ಅನಾಹುತಗಳಿಗೆ ಮೆಸ್ಕಾಂ ಜವಾಬ್ದಾರಿಯಾಗುವುದಿಲ್ಲ ಎಂದು ಸಂಸ್ಥೆಯು ಎಚ್ಚರಿಸಿದೆ.
ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ ಅಪಾಯಗಳನ್ನು ತಡೆಗಟ್ಟಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.
