ಪಡುಕುಡೂರು: ಯುವಕರು ನಿಸ್ವಾರ್ಥವಾಗಿ ಸಮಾಜಮುಖಿ ಸೇವೆಗಳನ್ನು ಮಾಡುತ್ತ ಬಂದಾಗ ಸದೃಢ ಸಮಾಜದ ನಿರ್ಮಾಣವಾಗುತ್ತದೆ. ಆರೋಗ್ಯ ಸೇವೆಯ ಜೊತೆ ಜನಸೇವೆಗೆ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಮಾದರಿಯಾಗಿದೆ. ಯುವ ಮನಸ್ಸುಗಳು ಒಂದಾದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯವಿದೆ ಶಾಸಕ ಸುನಿಲ್ ಕುಮಾರ್ ಹೇಳಿದರು.

ಅವರು ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಆಶ್ರಯದಲ್ಲಿ ಹಳೆ ವಿದ್ಯಾರ್ಥಿ ಸಂಘ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುದ್ರಾಡಿ ವಲಯದ ಸಹಕಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುನಿಯಾಲು, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಸಮುದಾಯ ವೈದ್ಯಕೀಯ ವಿಭಾಗ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವರ ಸಹಯೋಗದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ ಗ್ರಾಮೀಣ ಪ್ರದೇಶದ ಜನತೆಗೆ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆಯು ನಡೆದ ಆರೋಗ್ಯ ತಪಾಸಣಾ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ದೇವ ನಿರ್ಮಿತ ನಮ್ಮೂರಿನಲ್ಲಿ ನಾವು ಇಂದು ಒತ್ತಡ ಮುಕ್ತವಾಗಿ ಆರೋಗ್ಯವಾಗಿ ಸಾರ್ಥಕ ಜೀವನ ನಡೆಸಬೇಕು. ಅದಕ್ಕಾಗಿ ನಾವು ಜೀವನದಲ್ಲಿ ಒತ್ತಡ ಮುಕ್ತವಾಗಬೇಕು ಎಂದರು.

ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಅಧ್ಯಕ್ಷ ಚೇತನ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ, ಆರೋಗ್ಯ ಸೇವೆ, ಆರ್ಥಿಕ ನೆರವು, ಶಾಲೆ ಮತ್ತು ಶ್ರದ್ಧಾ ಕೇಂದ್ರಗಳ ಪರಿಸರ ಸ್ವಚ್ಚತೆ, ಮಾನವ ಸಂಪತ್ತಿನ ಅಭಿವೃದ್ಧಿ, ಮಾವಿನಕಟ್ಟೆಯ ಹೆಸರನ್ನು ಉಳಿಸಿ ಬೆಳೆಸಲು ಮಾವಿನ ಗಿಡ ನೆಡುವ ಯೋಜನೆಯ ಸಹಿತ ಮುಂದಿನ ವರ್ಷದ ಹಲವು ಸಮಾಜಮುಖಿ ಯೋಜನೆ ಯೋಚನೆಯನ್ನು ಪ್ರಕಟಿಸಿದರು.
ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಅಮೀನ್ ಶಿಬಿರ ಉದ್ಘಾಟಿಸಿದರು. ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆಯ ಗೌರವ ಸಲಹೆಗಾರರಾದ ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಮಾವಿನಕಟ್ಟೆ ಶಂಕರ ಶೆಟ್ಟಿ ಪಂಚವಟಿ ಮುನಿಯಾಲು ಅವರನ್ನು ಸನ್ಮಾನಿಸಲಾಯಿತು.
ಶಿಬಿರದಲ್ಲಿ ಹೃದಯ ತಪಾಸಣೆ, ಸ್ತನ ಮತ್ತು ಗರ್ಭಕೋಶ ತಪಾಸಣೆ, ಸಿಪಿಆರ್ ತರಬೇತಿ, ಮಧುಮೇಹ ಹಾಗೂ ಸಾಮಾನ್ಯ ಪರೀಕ್ಷೆಗಳು ನಡೆಯಿತು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದಕೊಂಡರು. ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆಯ ನೂತನ ಲೋಗೊವನ್ನು ಬಿಡುಗಡೆಗೊಳಿಸಲಾಯಿತು.
ಆರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿ ಅವರ ಪುತ್ಥಳಿಗೆ ನಿವೃತ್ತ ಪೋಸ್ಟ್ ಮಾಸ್ಟರ್ ಎಳ್ಳಾರೆ ಕೆಂಜರಜಡ್ಡು ವಿಶ್ವನಾಥ ನಾಯಕ್ ಮಾಲಾರ್ಪಣೆ ಮಾಡಿದರು.
ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ ಹೆಗ್ಡೆ, ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸತೀಶ ಪೂಜಾರಿ ಮುಳ್ಕಾಡು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುದ್ರಾಡಿ ವಲಯದ ಮೇಲ್ವೀಚಾರಕಿ ಸುಮಲತಾ, ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಡಾ. ಸೌಮ್ಯ, ಮಣಿಪಾಲ ಕೆಎಂಸಿಯ ತಜ್ಞ ವೈದ್ಯರಾದ ಡಾ.ವೃಂದಾಲತ್, ಡಾ. ವಿಧಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರಿನ ಸ್ವಾತಿ, ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಶಾಲೆಯ ಶಿಕ್ಷಕಿ ಶೃತಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಪಡುಪರ್ಕಳ ಶಂಕರ ಶೆಟ್ಟಿ, ಸೇವಾ ಪ್ರತಿನಿಧಿ ಚಿತ್ರಾ, ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಪದಾಧಿಕಾರಿಗಳು, ವಿವಿಧ ಗಣ್ಯರು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
ಮುನಿಯಾಲು ಕೆಪಿಎಸ್ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಿಸಿ, ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಸನ್ನ ಶೆಟ್ಟಿ ವಂದಿಸಿದರು.
