ಮೂಡುಬಿದಿರೆ ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಪಾರಾದೀಪ್ ಫಾಸ್ಪೇಟ್ ಲಿಮಿಟೆಡ್, ಮಂಗಳೂರುರವರ ( ಎಂ.ಸಿ.ಎಫ್. ಮಂಗಳೂರು ) ಪ್ರಾಯೋಜಕತ್ವದಲ್ಲಿ, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆಯ ಸಹಕಾರದಲ್ಲಿ ಉಚಿತ ನೇತ್ರ ಚಿಕಿತ್ಸೆ, ಬಿ.ಪಿ – ರಕ್ತ ಪರೀಕ್ಷೆ ಹಾಗೂ ಚರ್ಮರೋಗ ತಪಾಸಣಾ ಶಿಬಿರ ಜರುಗಿತು.

ಶಾಸಕ ಉಮಾನಾಥ ಕೋಟ್ಯಾನ್ ದೀಪ ಪ್ರಜ್ವಲನೆಯ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
“ಇಂದು ಲಕ್ಷಾಂತರ ಮಂದಿ ನೇತ್ರ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ. ಪಾರಾದೀಪ್ ಫಾಸ್ಫೇಟ್ರಂತಹ ಕಂಪೆನಿಗಳು ತಮ್ಮ ಸಿ.ಎಸ್. ಆರ್. ನಿಧಿಯನ್ನು, ಇಂತಹ ಸಮಸ್ಯೆಗಳನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸಮಾಜಮುಖಿ ಸೇವೆಯಲ್ಲಿ ಬಳಸಿಕೊಳ್ಳುತ್ತಿರುವುದು ಸ್ವಾಗತಾರ್ಹ. ಪಾರಾದೀಪ್ ಕಂಪೆನಿಯು ಇಂತಹ ಹಲವಾರು ಕಾರ್ಯಕ್ರಮ ನಡೆಸಿ ದೇಶಕ್ಕೆ ಮಾದರಿಯಾಗಿದ್ದು ಈ ಶಿಬಿರವು ಯಶಸ್ವಿಯಾಗಲಿ ಎಂದು ಹಾರೈಸಿದರು.

ಪಾರಾದೀಪ್ ಫಾಸ್ಫೇಟ್ ಲಿಮಿಟೆಡ್ನ ಜಾಯಿಂಟ್ ಜನರಲ್ ಮೆನೇಜರ್ ಡಾ. ಯೋಗೀಶ್ ಮಾತನಾಡಿ ಹಿಂದಿನ ಎಂ.ಸಿ.ಎಫ್ ಕಂಪನಿಯು ಇಂದು ಆಡಳಿತಾತ್ಮಕವಾಗಿ ಪಾರಾದೀಪ್ ಕಂಪನಿ ಎಂಬ ಹೆಸರನ್ನು ಹೊಂದಿದೆ. ಪಾರಾದೀಪ್ ಕಂಪನಿಯು ಇಂತಹ ಹಲವಾರು ಶಿಬಿರಗಳ ಮೂಲಕ ಜನಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಸಿ.ಎಸ್.ಆರ್ ನಿಧಿಯ ಮೂಲಕ ಈ ತನಕ55 ಶಿಬಿರಗಳನ್ನು ನಡೆಸಿ, ೨೦ ಸಾವಿರ ಮಂದಿಯ ನೇತ್ರ ಚಿಕಿತ್ಸೆ ಮಾಡಿಸಿ ಸುಮಾರು 2 ಸಾವಿರ ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ ಸಮಾಜಕ್ಕೆ ನೆರವಾಗಿದೆ. ಈ ಹಿಂದೆ ನಮ್ಮ ಕಂಪನಿಯ ಮೂಲಕ ಪ್ರೇರಣಾ ಶಾಲೆಯ ವಿದ್ಯಾರ್ಥಿನಿಗಳಿಗಾಗಿ ಸುಸಜ್ಜಿತ ಶೌಚಾಲಯ ನಿರ್ಮಿಸಿ ಕೊಟ್ಟ ತೃಪ್ತಿ ನಮಗಿದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾರೂರು ರವೀಂದ್ರ ಪೈಯವರು ಮಾತನಾಡಿ ನಾನು40 ವರ್ಷಗಳ ಹಿಂದೊಮ್ಮೆ ಈ ಶಾಲೆಗೆ ಬಂದಿದ್ದೆ. ಆಗಿನ ಹಾಗೂ ಈಗಿನ ಶಾಲೆಯ ಅಭಿವೃದ್ಧಿ ಸ್ಪಷ್ಟವಾಗಿ ಕಾಣುತ್ತಿದೆ. ಸೇವಾಂಜಲಿ ಎಜುಕೇಷನ್ ಟ್ರಸ್ಟ್ನವರ ಈ ಸಾಧನೆ ನಮಗೆ ಮಾರ್ಗದರ್ಶನವಾಗಬೇಕು. ಆಡಳಿತ ಮಂಡಳಿಯು ಶಾಲೆಯ ಅಭಿವೃದ್ಧಿಗೆ ಸ್ತುತ್ಯವಾದ ಕರ್ತವ್ಯ ಹೊಂದಿದೆ. ಇಂದಿನ ಶಿಬಿರವು ಯಶಸ್ವಿಯಾಗಲಿ ಎಂದು ಹಾರೈಸಿದರು .
ಸಭೆಯ ಆಧ್ಯಕ್ಷತೆ ವಹಿಸಿದ್ದ ಪಾರಾದೀಪ್ ನ ಮಾರಾಟ ವಿಭಾಗದ ಮುಖ್ಯಸ್ಥರಾದ ಎಸ್. ಗಿರೀಶ್ ರವರು ಮಾತನಾಡಿ
ನಮ್ಮ ಪಾರಾದೀಪ್ ಕಂಪೆನಿಯು ಭಾರತ ದೇಶದ ರಸಗೊಬ್ಬರ ಉತ್ಪಾದನೆಯಲ್ಲಿ ಶೇ ೧೦ ರಷ್ಟು ಪಾಲು ಹೊಂದಿದ್ದು, ದೇಶದಲ್ಲೇ ಪ್ರಮುಖ ಸ್ಥಾನ ಹೊಂದಿದೆ. ನಮ್ಮ ಕಂಪೆನಿಗೆ ಇಂತಹ ಸಮಾಜಮುಖಿ ಸೇವೆ ಮಾಡುವುದು ನಮ್ಮ ಆದ್ಯತೆಯಾಗಿದ್ದು, ಹೆಮ್ಮೆಯ ವಿಚಾರವಾಗಿದೆ. ಇಂದು ಅಸಂಖ್ಯ ಸಂಖ್ಯೆಯಲ್ಲಿ ಬಂದಿರುವ ಫಲಾನುಭವಿಗಳನ್ನು ನೋಡಿ ತುಂಬಾ ಸಂತೋಷವಾಗಿದೆ. ನಮ್ಮ ಸೇವೆಯು ಎಲ್ಲರಿಗೂ ದೊರಕುವಂತಾದರೆ, ನಮ್ಮ ಆಶಯ ಈಡೇರುತ್ತದೆ ಎಂದು ನುಡಿದರು.
ಪ್ರೇರಣಾ ಶಾಲೆಯ ಸಂಚಾಲಕ ಎಂ.ಶಾಂತರಾಮ ಕುಡ್ವ, ಶಾಲಾ ಮುಖ್ಯ ಮಾತಾಜಿ ಶ್ರೀಮತಿ ವತ್ಸಲಾ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೇರಣಾ ಶಾಲೆಯ ಮಾತಾಜಿ ಶ್ರೀಮತಿ ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು. ಸೇವಾಂಜಲಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ರಾಜೇಶ್ ಬಂಗೇರ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕ ಪಾರಾದೀಪ್ ನ ಅಶೋಕ ಪ್ರಭು, ಸೇವಾಂಜಲಿ ಎಜುಕೇಷನ್ ಟ್ರಸ್ಟ್ ನ ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್, ಕಾರ್ಯದರ್ಶಿ ಡಾ. ಕೇಶವ ಹೆಗ್ಡೆ, ಖಜಾಂಚಿ ಎಸ್.ಎನ್ . ಬೋರ್ಕರ್, ಟ್ರಸ್ಟಿಗಳಾದ ಮಂಜುನಾಥ ಶೆಟ್ಟಿ, ಆನಂದ ಕಾರ್ಲ ಉಪಸ್ಥಿತರಿದ್ದರು.
ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ನುರಿತ ಹಾಗೂ ಸುಪ್ರಸಿದ್ಧ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ೩೮೩ ಮಂದಿ ಶಿಬಿರದ ಪ್ರಯೋಜನ ಪಡೆದರು.
