ಹೆಬ್ರಿ :ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜೀಯವರ ನೇತೃತ್ವದ ಅಹಿಂಸಾತ್ಮಕ ಚಳುವಳಿಗಳ ಜೊತೆ – ಜೊತೆಗೆ ಕ್ರಾಂತಿಕಾರಕ ನಡೆಗಳ ಮೂಲಕ ಹೋರಾಟಕ್ಕೆ ಕಿಚ್ಚು ಹೊತ್ತಿಸಿ, ಅಜಾದ್ ಹಿಂದ್ ಫೌಜ್ ಸ್ಥಾಪನೆ ಮಾಡಿ ಇಂಗ್ಲೀಷರಿಗೆ ಸಿಂಹ ಸ್ವಪ್ನರಾದ ಸುಭಾಷ್ ಚಂದ್ರ ಬೋಸ್ ರ ಜೀವನ ದರ್ಶನ ಎಂದೆಂದಿಗೂ ಪ್ರಸ್ತುತ ಮತ್ತು ಯುವ ಪೀಳಿಗೆಗೆ ದಾರಿದೀಪ. ಕೇಂದ್ರ ಸರ್ಕಾರವೇ ಅವರ ಜನ್ಮ ದಿನಾಚರಣೆಯನ್ನು ಪರಾಕ್ರಮ್ ದಿವಸ್ ಆಗಿ ಆಚರಿಸುತ್ತಿರುವುದೇ ನೇತಾಜಿಯವರ ಪರಾಕ್ರಮಕ್ಕೆ ಸಾಕ್ಷಿ. ಸ್ಥೈರ್ಯ, ಧೈರ್ಯ, ಶಿಸ್ತು ಜೀವನದಲ್ಲಿ ರೂಪಿಸಿಕೊಂಡಾಗ ಬದುಕು ಹಸನಾಗುತ್ತದೆ. ಎಲ್ಲವನ್ನು ಎದುರಿಸಿ ಬಾಳುವ ಶಕ್ತಿ ಸಿಗುವುದೇ ಇಂತಹ ಮಹನೀಯರ ಬಗೆಗಿನ ಸಾಧನಗಳನ್ನು ಓದಿ ಅರಿತಾಗ ಎಂದು ಮುದ್ರಾಡಿ ಪ್ರೌಢಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಅಶೋಕ ಕುಮಾರ್ ಶೆಟ್ಟಿ ಹೇಳಿದರು.

ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ರ ಜನ್ಮ ದಿನಾಚರಣೆಯ ಪ್ರಯುಕ್ತ ಮುದ್ರಾಡಿಯ ವೃತ್ತದಲ್ಲಿನ ನೇತಾಜಿಯ ಪ್ರತಿಮೆಗೆ ನಮನ ಸಲ್ಲಿಸಿ ಮಾತನಾಡಿದರು.ಮುದ್ರಾಡಿ ಮಹಾಗಣಪತಿ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಮುದ್ರಾಡಿ ನೇತಾಜಿ ಪ್ರತಿಮೆಗೆ ಹೂ ಮಾಲಾರ್ಪಣೆ ಮಾಡಿದರು.
ವೃತ್ತದಲ್ಲಿನ ನೇತಾಜಿ ಪ್ರತಿಮೆಯ ಸ್ಥಾಪಕರಾದ, ಅಖಿಲ ಭಾರತೀಯ ನೇತಾಜಿ ಕ್ರಾಂತಿಕಾರಿ ಸಂಘ (ರಿ.) ಮುಂಬಯಿಯ ಪ್ರಮುಖರಾದ ಮುದ್ರಾಡಿ ದಿವಾಕರ ಎನ್. ಶೆಟ್ಟಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು.
ಮುದ್ರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಮ್ಯಾಕಾಂತಿ, ಹಿರಿಯ ಸದಸ್ಯರಾದ ಗಣಪತಿ ಎಂ.,ಸದಸ್ಯರಾದ ಉಪ್ಪಳ ಸಂತೋಷ ಕುಮಾರ್ ಶೆಟ್ಟಿ, ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ ಉಪಸ್ಥಿತರಿದ್ದರು..
ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಸ್ವಾಗತಿಸಿದರು. ಹಿರಿಯ ಶಿಕ್ಷಕ ಮಹೇಶ ನಾಯ್ಕ ಕೆ. ಕಾರ್ಯಕ್ರಮ ನಿರೂಪಿಸಿ, ಪಿ. ವಿ. ಆನಂದ ವಂದಿಸಿದರು.ಶಿಕ್ಷಕ ವೃಂದದವರು, ಊರಿನ ಹಿರಿಯರು, ರಿಕ್ಷಾ ಚಾಲಕರು ಹಾಗೂ ಮಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
